ಶಿವಮೊಗ್ಗ: ‘ಸಮುದಾಯದ ಯುವಕರಲ್ಲಿನ ದೇಶವಿರೋಧಿ ಚಿಂತನೆಗಳನ್ನು ಮುಸ್ಲಿಂ ಸಮಾಜದ ಮುಖಂಡರು ಸರಿ ಮಾಡಬೇಕು’ ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.
ಶಿರಾಳಕೊಪ್ಪದಲ್ಲಿ ಸಿಎಫ್ಐ ಸಂಘಟನೆ ಹೆಸರಲ್ಲಿ ಗೋಡೆ ಬರಹ ಬರೆದಿರುವ ಬಗ್ಗೆ ಭಾನುವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಗೋಡೆ ಬರಹದಂತಹ ಕೃತ್ಯ ಮಾಡುವ ಸಂಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪಿಎಫ್ಐ, ಸಿಎಫ್ಐ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದನ್ನು ಪ್ರಶ್ನಿಸಿ, ಕೆಲವರು ನ್ಯಾಯಾಲಯಕ್ಕೂ ಹೋಗಿದ್ದರು. ಆದರೆ, ನ್ಯಾಯಾಲಯ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ. ದೇಶದಲ್ಲಿದ್ದುಕೊಂಡೇ ದೇಶ ವಿರೋಧಿ ಕೃತ್ಯ ಮಾಡುವವರ ವಿರುದ್ಧ ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ ಎಂದರು.
ಈಗಲೂ ದೇಶ ವಿರೋಧಿ ಕೃತ್ಯಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿದೆ. ಅದರ ಉದಾಹರಣೆಯೇ ಶಿರಾಳಕೊಪ್ಪ ದಲ್ಲಿನ ಗೋಡೆ ಬರಹ ಎಂದರು.
ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈವರೆಗೆ ಆಳ್ವಿಕೆ ನಡೆಸಿದವರು ಪಿಎಫ್ಐ ಅನ್ನು ಪೋಷಿಸಿದ ಪ್ರತಿಫಲವಾಗಿ ಇದೆಲ್ಲಾ ನಡೆಯುತ್ತಿದೆ ಎಂದು ಹೇಳಿದರು. ಬಿಜೆಪಿ ರೌಡಿ ಮೋರ್ಚಾ ಮಾಡಲಿ ಎಂಬ ಕಾಂಗ್ರೆಸ್ ಟೀಕೆಗೆ, ‘ಅದನ್ನು ಕಾಂಗ್ರೆಸ್ ಸ್ನೇಹಿತರೇ ಮಾಡೋದು ಒಳ್ಳೆಯದು’ ಎಂದರು.