ಶಿವಮೊಗ್ಗ: ಎ.ಜೆ. ಸದಾಶಿವ ಆಯೋಗದ ಒಳ ಮೀಸಲಾತಿ ವರದಿ ಪುರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ‘ಮಾದಿಗ ದಂಡೋರ ಸಮಿತಿ’ಯಿಂದಬುಧವಾರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
‘ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಶಿವಮೊಗ್ಗ ನಗರದ ಹೃದಯಭಾಗದಲ್ಲಿ ಮಾದಿಗ ಸಮಾಜದ ಸಮುದಾಯ ಭವನಕ್ಕೆ ಸುಮಾರು 2 ಎಕರೆ ಜಾಗ ಕೂಡಲೇ ಗುರುತಿಸಿ ಮಂಜೂರು ಮಾಡಬೇಕು. ಸರ್ಕಾರದ ಎಲ್ಲ ಇಲಾಖೆಗಳಲ್ಲೂ ನೇಮಕಾತಿಯಲ್ಲಿ ಹೊರಗುತ್ತಿಗೆಯನ್ನು ಕೂಡಲೇ ರದ್ದುಪಡಿಸಿ ಎಸ್ಸಿ, ಎಸ್ಟಿ ನೇಮಕಾತಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಇದುವರೆಗೂ ಆದಿಕರ್ನಾಟಕ ಎಸ್ಸಿ ಎಂದು ಜಾತಿ ದೃಢೀಕರಣ ಪತ್ರ ನೀಡುತ್ತಿದ್ದು, ಮಾದಿಗ ಸಮಾಜದವರಿಗೆ ಬದಲಾಗಿ ಮಾದಿಗ ಎಸ್ಸಿ ಎಂದು ಜಾತಿ ದೃಢೀಕರಣ ಪತ್ರ ನೀಡಲು ಜಿಲ್ಲಾಧಿಕಾರಿ ಎಲ್ಲ ತಹಶೀಲ್ದಾರ್ಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಕೆ. ಅಣ್ಣಪ್ಪ, ರಾಜ್ಯ ಉಪಾಧ್ಯಕ್ಷ ತಿಮ್ಲಾಪುರ ಲೋಕೇಶ್, ಎ.ಕೆ. ಹನುಮಂತಪ್ಪ, ಎಚ್.ಎನ್. ಪ್ರಭು, ಶಿವಪ್ಪ, ಇ. ರಮೇಶ್, ಕೆಂಪಮ್ಮ, ಮೀನಾಕ್ಷಮ್ಮ ಇದ್ದರು.