ಭದ್ರಾವತಿ: ‘ವಿವಿಧ ಕ್ಷೇತ್ರದಲ್ಲಿ ಸಿಕ್ಕಿರುವ ಮೀಸಲಾತಿ ಸೌಲಭ್ಯ ಯಾವುದೇ ರಾಜಕೀಯ ಪಕ್ಷಗಳ ಕೊಡುಗೆ ಅಲ್ಲ. ಬದಲಾಗಿ ಅದು ಸಂವಿಧಾನದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಕೊಟ್ಟಿರುವ ಹಕ್ಕು’ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಕಾಂಚನಾ ವೆಜ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ದಲಿತ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನಿಕ ರೀತಿಯಲ್ಲಿ ಹಕ್ಕು ದೊರೆಯುವಂತೆ ಮಾಡಿರುವ ಬಾಬಾಸಾಹೇಬರು ನಮ್ಮ ಆದರ್ಶ, ದೈವ ಸ್ವರೂಪ’ ಎಂದರು.
‘ಬಿಜೆಪಿ ಎಂದೂ ಮೀಸಲಾತಿ ರದ್ದು ಕುರಿತಂತೆ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ. ಬದಲಾಗಿ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚಿನ ರೀತಿಯಲ್ಲಿ ನಮ್ಮ ಸಮುದಾಯಗಳಿಗೆ ಕಾಯಕಲ್ಪ ಮಾಡಿಕೊಟ್ಟಿರುವುದು ನಮ್ಮದೇ ಪಕ್ಷ’ ಎಂದು ಹೇಳಿದರು.
‘ಸರ್ಕಾರ ಜಾರಿ ಮಾಡುವ ಯೋಜನೆಗಳನ್ನು ತಿಳಿದು ಅರ್ಜಿ ಸಲ್ಲಿಸುವ ಕೆಲಸ ಮಾಡಬೇಕಾದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಲಹೆ ಕೊಡುವ ಕೆಲಸ ಮಾಡಬೇಕು.ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ಜಾತಿ, ಜನಾಂಗದ ಹಿತಕ್ಕಾಗಿ ಸಾಕಷ್ಟು ಸೌಲಭ್ಯ ಘೋಷಿಸಿದ್ದು, ಅವುಗಳ ಸದ್ಬಳಕೆ ಆಗುವ ನಿಟ್ಟಿನಲ್ಲಿ ಮುಖಂಡರು ಕಾರ್ಯ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಶಿವರಾಜ್, ಕ್ಷೇತ್ರ ಅಧ್ಯಕ್ಷ ಎಂ. ಪ್ರಭಾಕರ, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಗಣೇಶರಾವ್, ಸೂಡಾ ಸದಸ್ಯರಾದ ದೇವರಾಜ್, ಸಾಮಾಜಿಕ ಜಾಲತಾಣ ಸಂಚಾಲಕ ಅವಿನಾಶ್ ಇದ್ದರು.