ಶಿವಮೊಗ್ಗ: ಭದ್ರಾವತಿಯ ಎಂಪಿಎಂ ಕಾರ್ಖಾನೆ ಮರು ಜೀವ ಕೊಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರಕ್ಕೆ ಎಂಪಿಎಂ ಬ್ಯಾಕ್ ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಸ್ವಾಗತಿಸಿವೆ.
ಕಾರ್ಖಾನೆ ಮತ್ತೆ ಆರಂಭವಾಗಬೇಕು. 112 ಬ್ಯಾಕ್ಲಾಗ್ ಉದ್ಯೋಗಿಗಳಿಗೆ ಭದ್ರತೆ ಸಿಗಬೇಕು. ಎಂಪಿಎಂಗೆ ತನ್ನದೇ ಇತಿಹಾಸವಿದೆ. ಸಾವಿರಾರು ಎಕರೆ ಜಮೀನು ಇದೆ. ಕಚ್ಚಾ ಸಾಮಗ್ರಿ ಲಭ್ಯವಿದೆ. ನೀರು, ವಿದ್ಯುತ್ ಸಂಪರ್ಕವಿದೆ. ನುರಿತ ಕಾರ್ಮಿಕರು ಇದ್ದಾರೆ. ಇದರ ಪುನಃಶ್ಚೇತನವಾದರೆ ಮತ್ತೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಸಂಘಟನೆಯ ಮುಖಂಡರಾದ ಬಿ.ಎನ್.ರಾಜು, ವಿ.ಎನ್.ದೊಡ್ಡಯ್ಯ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೆಲವು ದಿನಗಳ ಹಿಂದೆ ಮಾನವ ಹಕ್ಕುಗಳ ಹೋರಾಟ ಸಮಿತಿ ಎಂಪಿಎಂ ಅಭಿವೃದ್ಧಿಗೆ ಒತ್ತಾಯಿಸಿತ್ತು. ಇದರ ಫಲವಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಸಹ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಇಬ್ಬರಿಗೂ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅರುಣ್, ಚಂದ್ರಶೇಖರ, ನಾಗರಾಜ್, ಲತಾ, ಮಂಜುಳಾ, ಪಾರ್ವತಮ್ಮ, ರಾಜಪ್ಪ, ನರಸಿಂಹಪ್ಪ, ಸೆಲ್ವಕುಮಾರ್, ಶಿವರಾಜ್ ಇದ್ದರು.