ಶಿರಾಳಕೊಪ್ಪ: ಸಂಸದ ಬಿ.ವೈ. ರಾಘವೇಂದ್ರ ಅವರ ಬಂಡಿ ಬೈರನಹಳ್ಳಿಯ ಮನೆಯಲ್ಲಿನ ಶ್ರೀಗಂಧದ ಮರ ಕಳವು ಮಾಡಿದ್ದ, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ 16 ಬೈಕ್ಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಶಿಕಾರಿಪುರ ತಾಲ್ಲೂಕು ಸಂಡ ಗ್ರಾಮದ ಸೈಯದ್ ಇಸ್ರಾರ್(26), ಪುನೇದಹಳ್ಳಿಯ ರಾಕೇಶ್(24), ಶಿಕಾರಿಪುರದ ಗೋಪಾಲ (28) ಬಂಧಿತ ಆರೋಪಿಗಳು. ಪುನೇದಹಳ್ಳಿ ಹಬೀಬುಲ್ಲಾ (20), ಚಿಕ್ಕಜಂಬೂರಿನ ಮುಸ್ಸು(20) ಇನ್ನೂ ಪತ್ತೆಯಾಗಿಲ್ಲ.
ಶಿರಾಳಕೊಪ್ಪ, ಶಿಕಾರಿಪುರ ಟೌನ್, ಬೆನ್ನೂರು, ಹೊನ್ನಾಳಿ, ತಿಪಟೂರು, ಕಡೂರು ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳಿವೆ. ₹ 12 ಲಕ್ಷ ಮೌಲ್ಯದ 16 ಬೈಕ್, ಒಂದು ಕಾರು ಹಾಗೂ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಪಟ್ಟಣದ ಸಬ್ಇನ್ಸ್ಪೆಕ್ಟರ್ ರಮೇಶ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಬಿಲ್ ಪಾವತಿಸದೇ ಮಾಲೀಕನ ಮೇಲೆ ಹಲ್ಲೆ
ಹೊಳೆಹೊನ್ನೂರು: ಟೀ ಕುಡಿದ ಹಣ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬೀದಿ ಬದಿ ಅಂಗಡಿಯ ಮಾಲೀಕನ ಮೇಲೆಯೇ ಹಲ್ಲೆ ನಡೆಸಿದ್ದಾನೆ.
ಅರಹತೊಳಲಿನ ಮಸಾಲೆ ಮಂಡಕ್ಕಿ ಹೋಟೆಲ್ ಅಂಗಡಿಯಲ್ಲಿ ಟೀ ಕುಡಿದು ಹಣ ಪಾವತಿಸದೇ ಹೋಗುತ್ತಿದ್ದ ಕೇಶವ ಎಂಬುವವನಿಗೆ ವ್ಯಾಪಾರಿ ನಾಗಾನಂದ್ ಹಣ ನೀಡುವಂತೆ ಕೇಳಿದ್ದಾರೆ.
‘ಹಣ ನೀಡುವುದಿಲ್ಲ’ ಎಂದು ಅವರ ಮೇಲೆ ಹಲ್ಲೆ ಮಾಡಿದ್ದಾನೆ. ನಾಗಾನಂದ್ ಕಣ್ಣು ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.