ಶಿವಮೊಗ್ಗ: ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ಜನರು ವಿವಿಧ ಸಾಮಗ್ರಿಗಳ ಖರೀದಿಗೆ ಗುರುವಾರ ಮಾರುಕಟ್ಟೆಗೆ ದಾಂಗುಡಿ ಇಟ್ಟರು.
ನಗರದ ಮಾರುಕಟ್ಟೆಗಳು ಹಾಗೂ ಮಳಿಗೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು. ಗಾಂಧಿಬಜಾರ್ ಗ್ರಾಹಕರಿಂದ ಗಿಜಿಗುಡುತ್ತಿತ್ತು. ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಗೆ ಜನ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.
ನಗರದ ಹಲವೆಡೆ ಟನ್ಗಟ್ಟಲೆ ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇಡಲಾಗಿದೆ. ರಸ್ತೆಗಳಲ್ಲಿ ಮತ್ತು ತಳ್ಳು ಗಾಡಿಗಳಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ. ಬಿಳಿ ಕಬ್ಬು ಒಂದು ಜಲ್ಲೆಯ ಸಗಟು ದರ ₹ 50 ಹಾಗೂ ಕಪ್ಪು ಬಣ್ಣದ ಕಬ್ಬು ₹ 70 ರವರೆಗೆ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಜಲ್ಲೆಗಳನ್ನು ತುಂಡರಿಸಿ, ಒಂದನ್ನು ₹ 10 ಮತ್ತು ₹ 20ಕ್ಕೆ ಮಾರಾಟ ಮಾಡುತ್ತಿದ್ದಾರೆ.
‘ಎಳ್ಳು–ಬೆಲ್ಲ’ ತಯಾರಿಸಲು ಬೆಲ್ಲ, ಎಳ್ಳು, ಬಣ್ಣದ ಬತ್ತಾಸು, ಕೊಬ್ಬರಿ ಖರೀದಿಯಿಂದಾಗಿ ದಿನಸಿ ಮಾರಾಟ ಅಂಗಡಿಗಳಲ್ಲೂ ಜನರು ಹೆಚ್ಚಿದ್ದರು.