ಶಿವಮೊಗ್ಗ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮೃಣಾಲ್, ಶಾಸಕ ಬಿ.ಕೆ.ಸಂಗಮೇಶ್ವರ ಅವರ ಸಹೋದರನ ಪುತ್ರಿ ಡಾ.ಹಿತಾ ಅವರ ವಿವಾಹ ನಿಶ್ಚಿತಾರ್ಥ ಇಲ್ಲಿನ ಸರ್ಜಿ ಸಭಾಂಗಣದಲ್ಲಿ ಸೋಮವಾರ ನೆರವೇರಿತು.
ಬಂದ ಅತಿಥಿಗಳಿಗೆ ಸಂಗಮೇಶ್ವರ ಅವರ ಕುಟುಂಬದ ಸದಸ್ಯರು ಮೈಸೂರು ಪೇಟ ತೊಡಿಸಿ, ಬರಮಾಡಿಕೊಂಡರು. ನಿಶ್ಚಿತಾರ್ಥದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು. ಜೋಡಿಗಳು ಪರಸ್ಪರ ವಜ್ರದುಂಗುರ ಬದಲಾಯಿಸಿಕೊಂಡರು.
‘ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮರಂತೆ ಹೋರಾಟ ಮಾಡುತ್ತಾ, ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಕುಟುಂಬದ ಜತೆ ಬಾಂಧವ್ಯ ಬೆಸೆದಿರುವುದು ಸಂತಸವಾಗಿದೆ ಎಂದು ಸಂಗಮೇಶ್ವರ’ ಪ್ರತಿಕ್ರಿಯಿಸಿದರು.
ತುರ್ತು ಭೂ ಸ್ಪರ್ಶ ಮಾಡಿದ ಹೆಲಿಕಾಪ್ಟರ್
ನಿಶ್ಚಿತಾರ್ಥಸ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಚಿತ್ರದುರ್ಗದ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರ ಕುಟುಂಬವಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಪರಿಣಾಮ ಭದ್ರಾವತಿ ಸಮೀಪದ ಹಂಚಿನ ಸಿದ್ದಾಪುರದ ಶಾಲಾ ಮೈದಾನದಲ್ಲಿ ತುರ್ತು ಭೂ ಸ್ವರ್ಶ ಮಾಡಿತು. ನಂತರ ಅವರು ಕಾರಿನಲ್ಲಿ ಪಯಣ ಬೆಳೆಸಿದರು.