ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುಗಲಭೆ ಸೃಷ್ಟಿಗೆ ಗೃಹ ಸಚಿವರ ಕುತಂತ್ರ: ಕಿಮ್ಮನೆ ರತ್ನಾಕರ್ ಆರೋಪ

Last Updated 3 ಡಿಸೆಂಬರ್ 2021, 5:52 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಕೇಂದ್ರ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿ ಇದೆ. ಗೃಹಸಚಿವ ಆರಗ ಜ್ಞಾನೇಂದ್ರ ಜನರನ್ನು ದಿಕ್ಕು ತಪ್ಪಿಸಿ ತಾಲ್ಲೂಕಿನಲ್ಲಿ ಕೋಮು ಗಲಭೆ ಸೃಷ್ಟಿಗೆ ಯತ್ನಿಸಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ಮಾಡಿದರು.

ಬೆಜ್ಜವಳ್ಳಿಯಲ್ಲಿ ನಡೆದ ಅಕ್ರಮ ಜಾನುವಾರು ಸಾಗಣೆ ಘಟನೆ ಖಂಡಿಸಿ ಗುರುವಾರ ತಾಲ್ಲೂಕು ಕಚೇರಿಯ ಎದುರು ತಾಲ್ಲೂಕು ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘2013ರಲ್ಲಿ ಆರಗ ಜ್ಞಾನೇಂದ್ರ ಅವರು ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣ ತಿರುಚಿ 2018ರ ಚುನಾವಣೆ ಗೆದ್ದರು. 2023ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಇರುವುದರಿಂದ ಮತ್ತೆ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಕಿಮ್ಮನೆ ಆರೋಪಿಸಿದರು.

‘ಜಾನುವಾರು ಅಕ್ರಮ ಸಾಗಣೆ ದಂಧೆಯಲ್ಲಿ ಬಿಜೆಪಿಗರು ಶಾಮೀಲಾಗಿದ್ದಾರೆ. ಅನೇಕ ಪ್ರಕರಣಗಳಲ್ಲಿ ಅವರ ಇಬ್ಬಗೆಯ ನೀತಿ ಸಾಬೀತಾಗಿದೆ. ಬಿಜೆಪಿ, ಆರ್‌ಎಸ್‌ಎಸ್‌ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಣೆ ತಡೆಯಲು ಮುಂದಾದ ಬಜರಂಗದಳದ ಮುಖಂಡ ಪ್ರವೀಣ್ ಪೂಜಾರಿ ಅವರನ್ನು ಬಿಜೆಪಿಗರೇ ಕೊಲೆ ಮಾಡಿಸಿದರು. ಕೇಂದ್ರ, ರಾಜ್ಯ ಸರ್ಕಾರ ಯಾರ ನೇತೃತ್ವದಲ್ಲಿ ಇದೆ ಎಂದು ಆರ್‌ಎಸ್‌ಎಸ್‌ ಜನರಿಗೆ ಉತ್ತರಿಸಬೇಕು’ ಎಂದು ಅವರು ಆಗ್ರಹಿಸಿದರು.

20ರಂದು ಬೃಹತ್ ಪ್ರತಿಭಟನೆ: ‘ಜಾನುವಾರು ಅಕ್ರಮ ಸಾಗಣೆ, ಹಲ್ಲೆ ಪ್ರಕರಣ, ಬಿಜೆಪಿ ಪಿತೂರಿ ಖಂಡಿಸಿ ಡಿ. 20ರಂದು ತೀರ್ಥಹಳ್ಳಿ ತಾಲ್ಲೂಕು ಕಚೇರಿಯ ಎದುರು ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಜನರಿಗೆ ನಿಜ ವಿಷಯ ತಿಳಿಸುವುದು ಜವಾಬ್ದಾರಿ ಎಂದು ಭಾವಿಸಿದ್ದೇನೆ. ಅಧಿಕಾರಕ್ಕಾಗಿ ಬಿಜೆಪಿಗರು ನಡೆಸುತ್ತಿರುವ ಕುತಂತ್ರಗಳು ಜನರಿಗೆ ತಿಳಿಯಬೇಕು’ ಎಂದು ಕಿಮ್ಮನೆ ಹೇಳಿದರು. ಪ್ರತಿಭಟನೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ರಹಮತುಲ್ಲಾ ಅಸಾದಿ, ಗೀತಾ, ಸುಶೀಲ ಶೆಟ್ಟಿ, ಮಂಜುಳಾ, ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್, ಕೆಳಕೆರೆ ಪೂರ್ಣೇಶ್ ಇದ್ದರು.

ಆರಗ ರಾಜೀನಾಮೆಗೆ ಆಗ್ರಹ

‘ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನಿಭಾಯಿಸುವ ಸಾಮರ್ಥ್ಯ ಇಲ್ಲ. ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರ್‌ಎಸ್‌ಎಸ್‌ನ ಭಾರತೀಪುರ ದಿನೇಶ್ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ. ಆರಗ ಸಾಮರ್ಥ್ಯ ಆರ್‌ಎಸ್‌ಎಸ್‌ಗೆ ಗೊತ್ತಾಗಿದೆ. ಗೃಹಸಚಿವರಾಗಿ ಸ್ವಕ್ಷೇತ್ರದ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದ ಜ್ಞಾನೇಂದ್ರ ಗೌರವಯುತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ’ ಎಂದು ಕಿಮ್ಮನೆ ರತ್ನಾಕರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT