ಸೊರಬ: ಪ್ರತಿಯೊಬ್ಬರೂ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಂಡರೆ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಕೆ.ರಮೇಶ್ ಹೇಳಿದರು.
ಪಟ್ಟಣದ ಖಾಸಗಿ ಬಸ್ನಿಲ್ದಾಣದ ಆವರಣದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶನಿವಾರ ಹಮ್ಮಿಕೊಂಡಿದ್ದಕೊರೊನಾ ಜಾಗೃತಿ ಬೀದಿನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕೊರೊನಾದಿಂದ ಪಾರಾಗಲು ಅಗತ್ಯ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್, ಸ್ಯಾನಿಟೈಸರ್, ಸ್ವಚ್ಛತೆಯನ್ನು ಕಾಪಾಡಿಕೊಂಡು ತಾವು ಸುರಕ್ಷಿತವಾಗಿರುವ ಜೊತೆಗೆ ತಮ್ಮ ಕುಟುಂಬವನ್ನೂ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಎಎಸ್ಐ ಪಿ.ಜಯಪ್ಪ, ‘ಯುವ ಜನರು ಮಾದಕ ವಸ್ತುಗಳಿಂದ ದೂರವಿರಬೇಕು. ಸರ್ಕಾರ ಈಗಾಗಲೇ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ನಿರ್ಮೂಲನೆ ಮಾಡಲು ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕಾರ್ಯೋನ್ಮುಖವಾಗಿದೆ’ ಎಂದು ಹೇಳಿದರು.
ಗುಪ್ತವಾಗಿ ಬಾಲ್ಯವಿವಾಹಗಳಾಗುತ್ತಿವೆ ಎಂದು ಕೇಳಿಬರುತ್ತಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ಸಾರ್ವಜನಿಕರು ತರಬೇಕು. ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಹೇಳಿದರು.
ದಾವಣಗೆರೆಯ ಕಲಾವಿದರು ಬೀದಿನಾಟಕ ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ರೇಣುಕಾ, ಉಷಾ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ, ಸುಮಂಗಳಾ, ಸುಮಿತ್ರಾ, ನಾಗರತ್ನಾ, ಸೀತಾ, ಜಿ.ಎಂ. ತೋಟಪ್ಪ, ರವಿ ಕಲ್ಲಂಬಿ ಇದ್ದರು.