ಸಾಗರ: ಇಲ್ಲಿನ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು 21 ವರ್ಷದ ಯುವತಿಯ ಹೊಟ್ಟೆಯಲ್ಲಿದ್ದ 8 ಕೆ.ಜಿ. ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಪ್ರಸೂತಿ ತಜ್ಞರಾದ ಡಾ. ಪ್ರತಿಮಾ ಅವರ ಬಳಿ ಸೊರಬ ತಾಲ್ಲೂಕಿನ ಯುವತಿಯೊಬ್ಬರು ತೀವ್ರವಾಗಿ ಕಾಡುತ್ತಿದ್ದ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಯುವತಿಯನ್ನು ಸ್ಕ್ಯಾನಿಂಗ್ಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ.
ಅದನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತಿರುಗುವ ಅಪಾಯವಿತ್ತು.
ಇದನ್ನು ಮನಗಂಡ ವೈದ್ಯರಾದ ಡಾ.ಪ್ರತಿಮಾ, ಡಾ.ಪ್ರಕಾಶ್ ಬೋಸ್ಲೆ, ಸಿಬ್ಬಂದಿ ರೀಟಾ, ರೋಹಿನಿ, ಚಂದ್ರು ಹಾಗೂ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಯುವತಿಯ ಹೊಟ್ಟೆಯಲ್ಲಿದ್ದ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.