ಸಾಗರ: ಸಾರ್ವಜನಿಕರು ನಗರಸಭೆ ಕಚೇರಿಗೆ ಬಂದು ತೆರಿಗೆ ಪಾವತಿಸುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ನಗರದ ಎಲ್ಲಾ 31 ವಾರ್ಡ್ಗಳಲ್ಲೂ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.
ಇಲ್ಲಿನ ಲೋಹಿಯಾ ನಗರದಲ್ಲಿ ಶುಕ್ರವಾರ ನಡೆದ ನಗರಸಭೆಯ ತೆರಿಗೆ ವಸೂಲಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ತೆರಿಗೆ ವಸೂಲಾತಿ ಆಂದೋಲನದ ಅಂಗವಾಗಿ ನಗರಸಭೆ ಸಿಬ್ಬಂದಿ ಸಾರ್ವಜನಿಕರ ಮನೆ ಬಾಗಿಲಿಗೆ ಬರುತ್ತಾರೆ. ನೀರಿನ ಕಂದಾಯವನ್ನು ಸ್ಥಳದಲ್ಲೇ ಸ್ವೀಕರಿಸಲಿದ್ದು, ಮನೆ ಕಂದಾಯಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ಚಲನ್ ತುಂಬಲು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ವಿ. ಮಹೇಶ್, ‘ನಗರ ವ್ಯಾಪ್ತಿಯಲ್ಲಿ 43 ದಿನಗಳ ಕಾಲ ಕರ ವಸೂಲಾತಿ ಆಂದೋಲನ ನಡೆಯಲಿದೆ. ನಗರಸಭೆ ಆಡಳಿತವನ್ನು ಜನರ ಬಳಿ ಕೊಂಡೊಯ್ಯುವ ದೃಷ್ಟಿಯಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ್, ಸದಸ್ಯರಾದ ಸುಧಾ ಉದಯಕುಮಾರ್, ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಂದಾಯಾಧಿಕಾರಿ ಸಂತೋಷ್ ಕುಮಾರ್, ವೆಂಕಟೇಶ್, ರಘು, ಮಂಜುನಾಥ ಗೌಡ ಇದ್ದರು.