ಆನಂದಪುರಂ: ಮಲೆನಾಡು ಭಾಗದಲ್ಲಿ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ಅಪಾರ ನಷ್ಟ ಉಂಟಾಗಿದೆ. ಈ ಬಾರಿ ಅತಿ ಹೆಚ್ಚಿನ ನಷ್ಟ ಸಂಭವಿಸಿದೆ. ತಕ್ಷಣ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಆನಂದಪುರ, ಆಚಾಪುರ, ಯಡೇಹಳ್ಳಿ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು.
ನಿರಂತವಾಗಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಮನೆ, ನಾಟಿ ಮಾಡಿದ ಗದ್ದೆ, ಅಡಿಕೆ ತೋಟ ಸೇರಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.ಅನೇಕ ಭಾಗಗಳಲ್ಲಿ ಹಕ್ಕುಪತ್ರ ಇಲ್ಲದ ಮನೆಗಳು ಕುಸಿದು ಬಿದ್ದಿದೆ. ಬೆಳೆಗಳು ನೀರು ಪಾಲಾಗಿದೆ. ಸರ್ಕಾರ ಪರಿಶೀಲಿಸಿ ಪರಿಹಾರಕ್ಕೆ ಪರಿಗಣಿಸಬೇಕು. ನೋಡಲ್ ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸುವಾಗ ಮಾನವೀಯತೆ ಮರೆಯಬೇಕು. ಮೀನಮೇಷ ಎಣಿಸದೆ ವೈಜ್ಞಾನಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಮಳೆಯಿಂದ ಮನೆ ಕಳೆದುಕೊಂಡವರಿಗೆ, ಜಮೀನಿನಲ್ಲಿ ಫಸಲು ಕಳೆದುಕೊಂಡವರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ದೂರಿದರು.
ನಂತರ ಅವರು ಅಪಘಾತದಲ್ಲಿ ಮೃತಪಟ್ಟ 6 ವರ್ಷದ ಅಭಿಷೇಕ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಮಾಧಾನ ಹೇಳಿದರು.