ತೀರ್ಥಹಳ್ಳಿ: ಹಾರೋಗೊಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮಸ್ಥರು ನಿರ್ಮಿಸಿದ್ದ ಮಹಾತ್ಮ ಗಾಂಧೀಜಿ, ಸರಸ್ವತಿ ಮೂರ್ತಿಗಳನ್ನು ಭಾನುವಾರ ರಾತ್ರಿ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಗ್ರಾಮದಲ್ಲಿ ಅಡಿಕೆ ಆಯುವ ಕಾರ್ಮಿಕ ಗೋವಿಂದ ಎರಡು ದಿನಗಳ ಹಿಂದೆ ಶಾಲೆಯಲ್ಲಿ ನೀರು ಕೇಳಿದ್ದಾನೆ. ಆತನ ದುರವಸ್ಥೆ ನೋಡಿದ ಶಿಕ್ಷಕಿ ನೀರು ಕೊಡಲು ಹಿಂಜರಿದರು ಎನ್ನಲಾಗಿದೆ. ಸಿಟ್ಟಿಗೆದ್ದ ಆತ ಈ ಕೃತ್ಯ ಎಸಗಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಿರಿಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮೂರ್ತಿಗಳನ್ನು ಸ್ಥಾಪಿಸಿದ್ದರು. ಕೈತೋಟ, ಹೂವು, ತರಕಾರಿ, ತೆಂಗು- ಅಡಿಕೆ, ಗಿಡ-ಮರಗಳನ್ನು ಬೆಳೆಸಿ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಎಲ್ಲವನ್ನೂ ಹಾಳುಗೆಡವಲಾಗಿದೆ.