ಹೊಸನಗರ: ತಾಲ್ಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಡಿಯಿಂದ ಸಂಸೆ ಬರೇಕಲ್ ಹೋಂ ಸ್ಟೆ ರಸ್ತೆಯಲ್ಲಿ ಬುಧವಾರ ‘ವಿದ್ಯಾಗಮ’ ಯೋಜನೆಯಡಿ ಮನೆ ಪಾಠಕ್ಕೆ ಹೋಗುತ್ತಿದ್ದ ಶಿಕ್ಷಕಿಯೊಬ್ಬರನ್ನು ಮಾರಕಾಸ್ತ್ರ ತೋರಿಸಿ ಬೆದರಿಸಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಆರೋಡಿ ಕೊಡಸೆ ಸರ್ಕಾರಿ ಶಾಲಾ ಶಿಕ್ಷಕಿ ಮಂಜುಳಾ ತಮ್ಮ ಬೈಕಿನಲ್ಲಿ ಆರೋಡಿಯಿಂದ ಸಂಸೆ ಕಡೆ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಮೂವರು ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಾಂಗಲ್ಯ ಸರ, ಬಳೆ, ಉಂಗುರ ಸೇರಿ ₹ 4 ಲಕ್ಷಕ್ಕೂ ಹೆಚ್ಚು ಮೌಲ್ಯದ 92 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ ಎಂದು ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ.
ಹೊಸನಗರ ಸಿಪಿಐ ಮಧುಸೂಧನ್, ನಗರ ಠಾಣೆ ಪಿಎಸ್ಐ ಸಿ.ಆರ್. ಕೊಪ್ಪದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ:ಶಿಕ್ಷಕಿಯನ್ನು ಬೆದರಿಸಿ ಚಿನ್ನಾಭರಣ ದೋಚಿದ ಕಳ್ಳರನ್ನು ಶೀಘ್ರ ಪತ್ತೆ ಹಚ್ಚಬೇಕು ಎಂದುರಾಜ್ಯ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಆರ್. ಸುರೇಶ್, ಸಹ ಕಾರ್ಯದರ್ಶಿ ವಾಸಪ್ಪ ವಾಲ್ಮೀಕಿ, ನಿರ್ದೇಶಕ ಶ್ರೀನಿವಾಸ್, ಶಿಕ್ಷಕರಾದ ಗುರುಮೂರ್ತಿ, ಗಣೇಶ್ ರಾಜಪ್ಪ ಒತ್ತಾಯಿಸಿದ್ದಾರೆ.