ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗದಲ್ಲೂ ವಿಶಾಖಪಟ್ಟಣ ಗಾಂಜಾ ವಾಸನೆ

ಮಾದಕ ವ್ಯಸನಿಗಳು, ದಂಧೆಕೋರರ ಮಗ್ಗಲು ಮುರಿದ ಜಿಲ್ಲಾ ಪೊಲೀಸರು
Last Updated 27 ಡಿಸೆಂಬರ್ 2021, 3:41 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಗೆ ಗಾಂಜಾ ಪೂರೈಸುವ ಆಂಧ್ರಪ್ರದೇಶದ ಮೂಲಗಳನ್ನು ಭೇದಿಸಿ ಸದೆಬಡಿಯುತ್ತಿರುವ ಜಿಲ್ಲಾ ಪೊಲೀಸರ ಸಾಹಸಕ್ಕೆ ನಾಗರಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಜಿಲ್ಲೆಯ ಮಾದಕ ವ್ಯಸನಿಗಳು ಬಳಸುವ ಗಾಂಜಾದ ಶೇ 20ರಷ್ಟನ್ನು ಮಲೆನಾಡು ಪೂರೈಸಿದರೆ ಶೇ 80ರಷ್ಟು ಆಂಧ್ರಪ್ರದೇಶದಿಂದ ಸರಬರಾಜಾಗುತ್ತಿದೆ. ಐದು ವರ್ಷಗಳಿಂದ ಈಚೆಗೆ ಮಾದಕ ವ್ಯಸನಿಗಳ ಸಂಖ್ಯೆ ಶಿವಮೊಗ್ಗದಲ್ಲೂ ಗಣನೀಯವಾಗಿ ಹೆಚ್ಚಳವಾಗಿತ್ತು. ಬಿ.ಎಂ.ಲಕ್ಷ್ಮೀ ಪ್ರಸಾದ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದ ನಂತರ ಗಾಂಜಾ ಸೇರಿ ಮಾದಕ ಸಾಮಗ್ರಿಗಳ ಪೂರೈಕೆ, ಬಳಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಇದುವರೆಗೂ ಗಾಂಜಾ ಪ್ರಕರಣಗಳಲ್ಲಿ ಬೆಳೆಗಾರರು, ಸ್ಥಳೀಯ ವಿತರಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಪೂರೈಕೆಯ ಮೂಲಗಳನ್ನು ಪತ್ತೆ ಮಾಡಲಾಗುತ್ತಿದೆ. ಗಾಂಜಾ ಸೇವಿಸುವ ವ್ಯಸನಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.

ವಿಶೇಷ ತಂಡ ರಚನೆ: ಗಾಂಜಾ ಸೇವನೆ, ವಿತರಣೆ, ಬೆಳೆ ಕ್ಷೇತ್ರ, ಪೂರೈಕೆ ಜಾಲಗಳ ಮೇಲೆ ನಿರಂತರ ನಿಗಾ ಇಟ್ಟು ನಿಯಂತ್ರಿಸಲು ಪ್ರತ್ಯೇಕ ತಂಡಗಳನ್ನೇ ರಚಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯಾಚರಣೆ ಮಾಡುವ ಈ ತಂಡಗಳು ಹೊರ ಜಿಲ್ಲೆ, ರಾಜ್ಯಗಳಿಂದ ಶಿವಮೊಗ್ಗ ನಗರ, ಜಿಲ್ಲೆಯ ಇತರ ಪಟ್ಟಣಗಳು, ಗ್ರಾಮಾಂತರ ಪ್ರದೇಶಗಳಿಗೆ ಬರುವ ಹಸಿ ಮತ್ತು ಒಣ ಗಾಂಜಾಗಳನ್ನು ನಿರಂತರವಾಗಿ ಪತ್ತೆ ಮಾಡಿ, ವಶಕ್ಕೆ ಪಡೆಯುತ್ತಿವೆ. ವಾರಕ್ಕೆ ಐದಾರು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪ್ರಸಕ್ತ ಒಂದೇ ತಿಂಗಳಲ್ಲಿ
₹ 40 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಮಲೆನಾಡಿಗೆ ಗಾಂಜಾ ಹಳೆಯ ನಂಟು: ಹಲವು ವರ್ಷಗಳಿಂದಲೂ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಗಾಂಜಾ ಬಳಕೆಯಲ್ಲಿತ್ತು. ಅತ್ಯಂತ ಖಾಸಗಿಯಾಗಿ, ಸೀಮಿತವಾಗಿ ಬಳಕೆಯಾಗುತ್ತಿತ್ತು. ಎರಡು ದಶಕಗಳಿಂದ ಈ ದಂಧೆ ವಾಣಿಜ್ಯ ಸ್ವರೂಪ ಪಡೆದಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಮಾರಾಟ ಜಾಲ ವಿಸ್ತರಿಸಿಕೊಂಡಿದೆ. ಮಲೆನಾಡಿನ ರೈತರು ಹಣದಾಸೆಗೆ ಈ ಜಾಲದಲ್ಲಿ ಸಿಲುಕಿ ಅಪರಾಧಿಗಳಾಗುತ್ತಿದ್ದಾರೆ.

ಮುಖ್ಯವಾಗಿ ಮಲೆನಾಡಿನ ಹೊಲ, ತೋಟಗಳಲ್ಲಿ ಉಪ ಬೆಳೆಯಂತೆ ಈ ಗಾಂಜಾ ಬೆಳೆಯಲಾಗುತ್ತಿದೆ. ಮಲೆನಾಡಿನ ಮಧ್ಯ ಇರುವ ಹೊಲದಲ್ಲಿ ಒಂದಿಷ್ಟು ಗಿಡ ನೆಟ್ಟು ಪೋಷಿಸಲಾಗುತ್ತಿತ್ತು. ಸ್ಥಳೀಯವಾಗಿಯೇ ಜನರು ಚುಟ್ಟಾ, ಭಂಗಿ, ಸಿಗರೇಟುಗಳಲ್ಲಿ ತುಂಬಿ ಸೇವಿಸುತ್ತಿದ್ದರು. ಈಗ ಅದು ಬೃಹತ್ ಜಾಲವಾಗಿ ಬೆಳೆದಿದೆ. ದಂಧೆಯ ಹಿಂದೆ ವ್ಯವಸ್ಥಿತ ಜಾಲವೇ ಇದೆ.

ಮಲೆನಾಡಿನ ಕಾಡಿನಂಚಿನಲ್ಲಿರುವ, ಬಡ ರೈತರನ್ನು ಗುರುತಿಸುವ ಕೆಲವು ಮಧ್ಯವರ್ತಿಗಳು ಗಾಂಜಾ ಬೀಜಗಳನ್ನು ನೀಡುತ್ತಿದ್ದಾರೆ. ಗಾಂಜಾ ಬೆಳೆದ ಬಳಿಕ ತಾವೇ ಖರೀದಿಸುತ್ತಿದ್ದಾರೆ. ಹಣದಾಸೆಗೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಯೋಚಿಸದ ಕೆಲವು ರೈತರು ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ, ಮೆಕ್ಕೆಜೋಳದ ಮಧ್ಯೆ ಗುಟ್ಟಾಗಿ ಬೆಳೆಯುತ್ತಿದ್ದಾರೆ. ಯಾರ ಕಣ್ಣಿಗೂ ಸಿಗದೇ ವ್ಯವಹಾರ ಪೂರೈಸಿಕೊಂಡು ಹಣ ಸಂಪಾದಿಸುವ ಸಾಕಷ್ಟು ಮಂದಿ ಇದ್ದಾರೆ. ಡ್ರೋನ್‌ ಮೂಲಕ ಗಾಂಜಾ ಬೆಳೆ ಪತ್ತೆ ಹಚ್ಚುವ ಪ್ರಯತ್ನಗಳೂ ಜಿಲ್ಲೆಯಲ್ಲಿ ನಡೆದಿವೆ. ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದೆ. ಆದರೂ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿರಲಿಲ್ಲ.

ಗಾಂಜಾ ಸೇವನೆ ಪತ್ತೆಗೆ ಪರೀಕ್ಷಾ ಕಿಟ್‌
ಗಾಂಜಾ ಸೇವನೆ ಪತ್ತೆಗೆ ಕಿಟ್‌ ಬಳಸಲಾಗುತ್ತಿದೆ. ಕಿಟ್‌ನ ಮಾಪನಗಳ ಮೂಲಕ ಪರೀಕ್ಷೆ ಒಳಪಟ್ಟರೆ ಸೇವಿಸಿದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಈ ಕಿಟ್‌ಗಳ ಸಹಾಯದಿಂದ ಮಾದಕ ದ್ರವ್ಯ ಸೇವನೆ ಮಾಡಿದ ವ್ಯಕ್ತಿಗಳ ಮೂತ್ರವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೂಡಲೇ ಪಾಸಿಟಿವ್ ಫಲಿತಾಂಶ ನೀಡುತ್ತದೆ. ಸೇವಿಸದೇ ಇದ್ದರೆ ನೆಗೆಟಿವ್‌ ಫಲಿತಾಂಶ ಬರುತ್ತದೆ. ಪರೀಕ್ಷೆ ವೇಳೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದರೆ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ₹ 10 ಸಾವಿರ ದಂಡ ಹಾಗೂ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಶಾಲೆ, ಕಾಲೇಜು ತೊರೆದವರೇ ಹೆಚ್ಚು ವ್ಯಸನಿಗಳು
ಐದು ವರ್ಷಗಳಿಂದ ಜಿಲ್ಲೆಯ ಎಲ್ಲೆಡೆ ಹೆಚ್ಚುತ್ತಿದ್ದ ಗಾಂಜಾ ಹಾವಳಿ ವಿರುದ್ಧ ಮೂರು ತಿಂಗಳ ಅವಧಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್‌ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಲಕ್ಷಾಂತರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದೇ ಮೊದಲ ಬಾರಿ ದೊಡ್ಡಮಟ್ಟದ ಕಾರ್ಯಾಚರಣೆಗಳ ಮೂಲಕ ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಶೇ 80ರಷ್ಟು ದಂಧೆಗೆ ಕಡಿವಾಣ ಬಿದ್ದಿದೆ. ಈ ಕುರಿತು ಎಸ್‌ಪಿ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದಭಾಗ ಇಲ್ಲಿದೆ.

* ತ್ವರಿತವಾಗಿ ಗಾಂಜಾ ಜಾಲ ಭೇದಿಸಲು ಹೇಗೆ ಸಾಧ್ಯವಾಯಿತು?
–ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದಾಗ ಒಂದಷ್ಟು ಖಚಿತ ಮಾಹಿತಿಗಳಿದ್ದವು. ಆಂಧ್ರಪ್ರದೇಶದಿಂದಲೇ ಹೆಚ್ಚಿನ ಗಾಂಜಾ ಬರುತ್ತಿತ್ತು. ಶಿವಮೊಗ್ಗ ಎಸ್‌ಪಿಯಾದ ನಂತರ ಇಲ್ಲೂ ಅದೇ ಮೂಲಗಳೆಂದು ಖಚಿತವಾಯಿತು. ಇದರಿಂದ ನಿಖರ ದಾಳಿ ನಡೆಸಲು ಸಹಕಾರಿಯಾಯಿತು.

* ಮಲೆನಾಡಿನಲ್ಲೇ ಸಾಕಷ್ಟು ಬೆಳೆಯುತ್ತಾರಲ್ಲವೇ?ಆಂಧ್ರದಿಂದ ಏಕೆ?
–ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪ್ರಮಾಣದಲ್ಲಿ ಶೇ 20ರಷ್ಟು ಸಹ ಬೆಳೆಯುವುದಿಲ್ಲ. ಶೇ 80ರಷ್ಟು ಆಂಧ್ರದ ವಿಶಾಖಪಟ್ಟಣ ಸುತ್ತಮುತ್ತಲಿನಿಂದ ಬರುತ್ತದೆ. ಅಲ್ಲಿನ ಪೊಲೀಸ್‌ ಮೂಲಗಳ ಪ್ರಕಾರ 12 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಶಿವಮೊಗ್ಗ ಸೇರಿ ರಾಜ್ಯದ ಪೊಲೀಸರ ಮಾಹಿತಿ ನಂತರ ಅಲ್ಲಿನ ಸರ್ಕಾರ ‘ಆಪರೇಷನ್‌ ಪರಿವರ್ತನ್‌’ ಆರಂಭಿಸಿದೆ. 5,500 ಹೆಕ್ಟೇರ್ ನಾಶ ಮಾಡಲಾಗಿದೆ.

* ರಾಜಕೀಯ, ಹಿತಾಸಕ್ತಿ ಒತ್ತಡಗಳಿವೆಯೇ?
–ಯಾವುದೇ ಒತ್ತಡಗಳಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಈ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತಿದ್ದಾರೆ. ಉನ್ನತಾಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ. ಒಂದು ತಂಡವಾಗಿ ಕೆಲಸ ಮಾಡುತ್ತಿರುವ ಪರಿಣಾಮ ಯಶಸ್ಸು ದೊರೆತಿದೆ.

* ಜಿಲ್ಲೆಯ ಎಷ್ಟು ವಿದ್ಯಾರ್ಥಿಗಳು ವ್ಯಸನಿಗಳಾಗಿದ್ದಾರೆ?
–ವಿದ್ಯಾರ್ಥಿಗಳು ವ್ಯಸನಕ್ಕೆ ಒಳಗಾಗಿರುವುದು ಕಡಿಮೆ. ಶಾಲೆ, ಕಾಲೇಜು ತೊರೆದವರು, ರೌಡಿ ನಡವಳಿಕೆ ರೂಢಿಸಿಕೊಂಡವರು, ಕೂಲಿ ಕೆಲಸ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆ್ಯಶ್ ಆಯಿಲ್‌, ಕೇಕ್‌ಗಳಿಗೆ ಬೆರೆಸಿ ಸೇವಿಸುತ್ತಿದ್ದಾರೆ.

* ಗಾಂಜಾ ನಿಯಂತ್ರಣ ಬರಿ ಪೊಲೀಸರ ಕೆಲಸವೇ?
–ಅಪರಾಧ ಮಟ್ಟ ಹಾಕಲು ಪೊಲೀಸರು ಬೇಕು. ಜಾಗೃತಿ ಮೂಡಿಸುವಲ್ಲಿ ಶಿಕ್ಷಕರು, ಪೋಷಕರ ಪಾತ್ರ ಹಿರಿದು. ಕೋವಿಡ್‌ ಕಾರಣ ಶಾಲೆ, ಕಾಲೇಜುಗಳು ತಡವಾಗಿ ಆರಂಭವಾಗಿವೆ. ಎಲ್ಲ ಕಡೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಪ್ರತಿ ಕಾಲೇಜಿನಲ್ಲೂ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಲಾಗಿದೆ. ವಿದ್ಯಾರ್ಥಿಗಳ ನಡವಳಿಕೆ, ಹಣದ ಬಳಕೆ ಮೇಲೆ ನಿಗಾವಹಿಸಲಾಗಿದೆ. ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ.

* ನಿಯಂತ್ರಣದ ನಂತರ ಅಪರಾಧ ಪ್ರಕರಣಗಳು ತಗ್ಗಿವೆಯೇ?
–ಕಡಿಮೆಯಾಗಿವೆ. ವ್ಯಸನಕ್ಕೆ ಒಳಗಾದವರು ಹಣಕ್ಕಾಗಿ ಮೊಬೈಲ್‌ ಸೇರಿ ಕಳವು ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು. ಈಚೆಗೆ ಎರಡು ಕೊಲೆಗಳು ಇದೇ ಕಾರಣಕ್ಕೆ ನಡೆದಿವೆ. ಟಿಪ್ಪುನಗರ, ಊರುಗಡೂರು, ಬಾಪೂಜಿನಗರ ಮತ್ತಿತರ ಕಡೆ ಗುಂಪುಗಳಿದ್ದವು. ಈಗ ಎಲ್ಲರನ್ನೂ ಮಟ್ಟಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT