ತೀರ್ಥಹಳ್ಳಿ: ‘ಅತೀ ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಇದೆ. ಜೆಡಿಎಸ್ ಪಕ್ಷದ ‘ಜಲಧಾರೆ’ ಸಂಕಲ್ಪದಂತೆ 2023ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತೇವೆ’ ಎಂದು ತಾಲ್ಲೂಕು ಜೆಡಿಎಸ್ ಮುಖಂಡ ಯಡೂರು ರಾಜಾರಾಮ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ತಾಲ್ಲೂಕಿಗೆ ಬಂದ ಜನತಾ ಜಲಧಾರೆ ರಥಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದರು.
‘ರಾಜ್ಯದ ನದಿಗಳಲ್ಲಿ ಸಿಗುವ ಶೇ 20ರಷ್ಟು ನೀರನ್ನು ಮಾತ್ರ ನಾವು ಬಳಕೆ ಮಾಡುತ್ತಿದ್ದೇವೆ. ನೀರು ಪೋಲಾಗದಂತೆ ಸಂಪೂರ್ಣ ಉಪಯೋಗ ಮಾಡಿಕೊಳ್ಳುವ ಯೋಜನೆ ಇದು’ ಎಂದು ತಿಳಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಕಿರಣ್ ಪ್ರಭಾಕರ್ ಮಾತನಾಡಿ, ‘ಶಾಂತವೇರಿ ಗೋಪಾಲಗೌಡರ ಹೆಸರು ಹೇಳುವ ಯೋಗ್ಯತೆ ಉಳಿದ ಪಕ್ಷಗಳಿಗೆ ಇಲ್ಲ. ರೈತರು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಸಾಧ್ಯವಾಗದೆ ದೇಶದಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ. ಕೋಮುವಾದದಿಂದ ಸಮಾಜ ನಿರ್ಮಾಣ ಮಾಡಲು ಆಗುವುದಿಲ್ಲ. ಜೆಡಿಎಸ್ ಬೇರುಗಳು ಗಟ್ಟಿಯಾಗಿದೆ. ಜೊಳ್ಳುಗಳು ಹೋಗಿ ಗಟ್ಟಿ ಕಾಳುಗಳಿಂದ ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತಿದೆ’ ಎಂದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ‘ಏ.22ರಂದು ಶಿವಮೊಗ್ಗದಲ್ಲಿ ನಡೆಯುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ಬಹಿರಂಗ ಸಭೆಯಲ್ಲಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ತಲಬಿ ರಾಘವೇಂದ್ರ, ಹೊದಲ ಶಿವು, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಹೆದ್ದೂರು ನಟರಾಜ್, ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರತನ್ ಕಮ್ಮರಡಿ, ಮುಖಂಡ ಆರಗ ಲಿಂಗಪ್ಪ ಇದ್ದರು.
* ಕಾಂಗ್ರೆಸ್ ಮುಳುಗುವ ಹಡಗು. ಉತ್ತರ ಪ್ರದೇಶದಲ್ಲಿ 500 ಸೀಟು ಕಳೆದುಕೊಂಡಿದೆ. ವಿರೋಧ ಪಕ್ಷವಾಗಿಯೂ ನಿಲ್ಲದ ಪರಿಸ್ಥಿತಿಯಲ್ಲಿ ಅಧಿಕಾರದ ಹಗಲು ಗನಸು ಕಾಣುತ್ತಿದೆ. ಕ್ಷೇತ್ರದಲ್ಲಿ ಟಿಕೆಟ್ಗಾಗಿ ಕಿತ್ತಾಟ ನಡೆದಿದೆ.
-ಕಿರಣ್ ಪ್ರಭಾಕರ್, ಅಧ್ಯಕ್ಷ, ಜೆಡಿಎಸ್ ತಾಲ್ಲೂಕು ಘಟಕ
* ತಾಲ್ಲೂಕಿನಲ್ಲಿ 25 ಸಾವಿರ ಮತಬ್ಯಾಂಕ್ ಹೊಂದಿರುವ ಜೆಡಿಎಸ್ ಒಣಗಿದ ಹುಲ್ಲಿನಂತೆ ಆಳವಾದ ಬೇರು ಹೊಂದಿದೆ. ಒಮ್ಮೆ ಮಳೆಯಾದರೆ ಬೆಳೆದು ನಿಲ್ಲುವ ತಾಕತ್ತು ಹೊಂದಿದೆ. ಯುವ ಜನರು ಇನ್ನಷ್ಟು ಶಕ್ತಿ ನೀಡುವ ಕೆಲಸ ಮಾಡಬೇಕು.