ಶಿವಮೊಗ್ಗ: ಹಿಂದೂ ಜಾಗೃತಿಗೆ ಆರ್ಎಸ್ಎಸ್ ಮುಖ್ಯ ಕಾರಣ. ದೇಶದ ಹಿಂದೂ ದೇವಾಲಯಗಳ ಪುನರ್ ನಿರ್ಮಾಣವೇ ಹಿಂದೂಗಳ ಸಂಕಲ್ಪ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಪ್ರತಿಪಾದಿಸಿದರು.
ನಗರದಲ್ಲಿ ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳವರೆಗೂ ಹಿಂದೂ ಜಾಗೃತಿ ಕುರಿತು ಹೆಚ್ಚು ಕ್ರಿಯಾಶೀಲತೆ ಇರಲಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ ನಂತರ ಹಿಂದೂ ಜಾಗೃತಿ ಹೆಚ್ಚುತ್ತಾ ಹೋಗುತ್ತಿದೆ. ಕಾಶಿಯಲ್ಲಿರುವ ಮಸೀದಿಯಲ್ಲಿ ಶಿವಲಿಂಗ ಇತ್ತು ಎಂದು ಹೇಳಲು ಇಷ್ಟು ವರ್ಷಗಳು ಕಾಯಬೇಕಾಯಿತು. ದೇಶದಲ್ಲಿ ಸುಮಾರು 36 ಸಾವಿರ ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂದು ದೂರಿದರು.
‘ಶಕ್ತಿಶಾಲಿಗಳ ವಿರುದ್ಧ ಸೋತವರು ಹತಾಷರಾಗಿ ಆರ್ಎಸ್ಎಸ್ ವಿರುದ್ಧ ಟೀಕೆಗಳು ಮಾಡುತ್ತಿದ್ದಾರೆ. ಭಾರತದಲ್ಲಿ ಜನಿಸಿ ಇಲ್ಲೇ ಬೆಳೆದು ಇಲ್ಲಿನ ಅನ್ನ, ನೀರು, ಗಾಳಿ ಸೇವಿಸುತ್ತಾ ಜೀವಿಸುತ್ತಿರುವ ಮುಸ್ಲಿಮರು ವಂದೇ ಮಾತರಂ ಹೇಳಿದರೆ ಸ್ವಾಗತಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.