ಸಾಗರ: ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಮುಂದಾಗಿದ್ದ ನಾಲ್ವರನ್ನು ಇಲ್ಲಿನ ನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಬ್ದುಲ್, ರಾಮಪ್ಪ, ಸಂದೀಪ್, ವಿ.ಜೆ.ರೋಹಿತ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಸಾಗರ ನಗರ ಹಾಗೂ ಕಾರ್ಗಲ್ ನಿವಾಸಿಗಳಾಗಿದ್ದಾರೆ.
ಅಂಬರ್ ಗ್ರೀಸ್ ಎಂಬುದು ಸುಗಂಧ ದ್ರವ್ಯ ಹಾಗೂ ಮಾದಕ ವಸ್ತು ತಯಾರಿಕೆಯಲ್ಲಿ ಬಳಸುವ ವಸ್ತುವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇದರ ಸಾಗಾಣಿಕೆ ಹಾಗೂ ಮಾರಾಟವನ್ನು ಅರಣ್ಯ ಕಾಯ್ದೆಯಡಿ ನಿಷೇಧಿಸಲಾಗಿದೆ.
ಎಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶದಲ್ಲಿ ಸಿಪಿಐ ಕೃಷ್ಣಪ್ಪ, ಪಿಎಸ್ಐ ತಿರುಮಲೇಶ್, ಟಿ.ಡಿ. ಸಾಗರ್ ಕರ್, ಅಪರಾಧ ವಿಭಾಗದ ಸಿಬ್ಬಂದಿ ಸಂತೋಷ ನಾಯ್ಕ್, ಹಜರತ್ ಅಲಿ, ಪ್ರವೀಣ್ ಕುಮಾರ್, ರತ್ನಾಕರ್, ಮಲ್ಲೇಶ್, ಶ್ರೀಧರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.