ಶಿವಮೊಗ್ಗ: ವಿಶ್ವ ಹಾವು ದಿನ ಆದ ಶನಿವಾರ ಬೆಳ್ಳಂಬೆಳಗ್ಗೆಯೇ ಬಂದ ಫೋನ್ ಕರೆಗೆ ಸ್ಪಂದಿಸಿದ ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅಪರೂಪಕ್ಕೆ ಕಾಣ ಸಿಕ್ಕುವ ಬಿಳಿ ಬಣ್ಣದ ನಾಗರ ಹಾವು ರಕ್ಷಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ರಾಮನಕೊಪ್ಪದ ನಾರಾಯಣ ಹೃದಯಾಲಯ ಹಿಂಭಾಗದಲ್ಲಿನ ರಂಗಪ್ಪಗೌಡರ ತೋಟದ ಮನೆಯಲ್ಲಿನ ಕಟ್ಟಿಗೆ ತುಂಡುಗಳ ರಾಶಿಯಲ್ಲಿ ಅಡಗಿದ್ದ ಬಿಳಿ ನಾಗರ ಹಾವನ್ನು ಹಿಡಿದು ಚೀಲದಲ್ಲಿ ಹಾಕಿಕೊಂಡು ತಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ನಂತರ ಕಾಡಿಗೆ ಬಿಡಲಾಯಿತು.
ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವಾಗಿಸಿಕೊಂಡಿರುವ ಕಿರಣ್. ಇಲ್ಲಿಯವರೆಗೆ ಸಾವಿರಾರು ಉರಗಗಳನ್ನು ರಕ್ಷಿಸಿದ್ದಾರೆ. ಇದು ನಾನು ರಕ್ಷಿಸಿರುವ ಎರಡನೇ ಬಿಳಿ ಬಣ್ಣದ ನಾಗರ ಹಾವು ಎಂದು ಕಿರಣ್ 'ಪ್ರಜಾವಾಣಿ'ಗೆ ತಿಳಿಸಿದರು.
ವಾಸ್ತವವಾಗಿ ಬಿಳಿ ಬಣ್ಣದ ನಾಗರಹಾವು ಎಂಬುದು ಇಲ್ಲ. ಬದಲಿಗೆ ಇದೊಂದು ಹಾವಿನ ಚರ್ಮಕ್ಕೆ ಬಂದಿರುವ ರೋಗ ಎಂದು ಕಿರಣ್ ಹೇಳುತ್ತಾರೆ.
ಚರ್ಮಕ್ಕೆ ವರ್ಣದ್ರವ್ಯದ (pigment) ಕೊರತೆಯಿಂದ ಹುಟ್ಟುವಾಗಲೇ ಬಿಳಿ ಬಣ್ಣದಲ್ಲಿ ಹುಟ್ಟಿರುತ್ತವೆ. ವರ್ಣ ದ್ರವ್ಯದ ಕೊರತೆಯಿಂದ ಹುಟ್ಟುವ ಜೀವಿಗಳಿಗೆ ಅಲ್ಬಿನೊ ಎಂದು ಕರೆಯುತ್ತಾರೆ ಎಂಬುದಾಗಿ ಕಿರಣ್ ಹೇಳುತ್ತಾರೆ.
ಮೂರು ಅಡಿ ಉದ್ದವಿರುವ ಬಿಳಿ ನಾಗರವನ್ನು ಶಿವಮೊಗ್ಗದ ಅರಣ್ಯ ಇಲಾಖೆ ಕಚೇರಿ ಎದುರು ಸ್ವಲ್ಪ ಹೊತ್ತು ಆಟವಾಡಿಸಿದ ಕಿರಣ್ ಅಲ್ಲಿ ನೆರೆದವರಿಗೆ ಹಾಗೂ ಕಚೇರಿ ಸಿಬ್ಬಂದಿಗೆ ಕೆಲ ಹೊತ್ತು ಅದರ ವಿಶೇಷತೆಗಳ ಬಗ್ಗೆ ತಿಳಿಸಿದರು.