ಕಡೇನಂದಿಹಳ್ಳಿ (ಶಿರಾಳಕೊಪ್ಪ):ಜೀವನ ಉನ್ನತಿಗೆ ದುಡಿಮೆ, ಶಾಂತಿಯ ಬದುಕಿಗೆ ಭಗವಂತನ ಕೃಪೆ ಇದ್ದರೆ ಬದುಕು ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕಡೇನಂದಿಹಳ್ಳಿಯಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್ ಧರ್ಮ ಸಮಾರಂಭದ 7ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜೀವಾತ್ಮರಲ್ಲಿ ಪರಮಾತ್ಮ ನೆಲೆಸಿದ್ದಾನೆ. ತನ್ನನ್ನು ತಾನು ದೇವರಿಗಾಗಿ ಧರ್ಮಕ್ಕಾಗಿ ಅರ್ಪಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು. ಜಗತ್ತು ಬೆಳಗಲು ಸೂರ್ಯ ಬೇಕು. ಬದುಕು ಬೆಳೆಯಲು ಗುರು ಬೇಕು. ಪರಮಾತ್ಮನಿಗೂ ಜೀವಾತ್ಮನಿಗೂ ಇರುವ ಸಂಬಂಧವನ್ನು ಸಂಸ್ಕಾರದ ಮೂಲಕ ಗುರು ಕೊಡುತ್ತಾನೆ. ಅವ್ಯಕ್ತವಾಗಿರುವ ಭಗವಂತನನ್ನು ವ್ಯಕ್ತ ರೂಪದಲ್ಲಿ ತೋರಿಸುವಾತನೇ ಗುರು ಎಂಬುದನ್ನು ಮರೆಯಬಾರದು. ತನಗಾಗಿ ಬಯಸುವುದು ಜೀವ ಗುಣವಾದರೆ ಎಲ್ಲರಿಗಾಗಿ ಬಯಸುವುದು ದೇವ ಗುಣ. ಬೆಟ್ಟಕ್ಕೆ ಬೆಟ್ಟದ ಅವಶ್ಯಕತೆ ಇಲ್ಲದೇ ಇರಬಹುದು. ಆದರೆ ಮನುಷ್ಯನಿಗೆ ಮನುಷ್ಯನ ಅವಶ್ಯಕತೆ ಇದೆ ಎನ್ನುವುದನ್ನು ಸದಾ ನೆನಪಿಸಿಕೊಂಡು ಬಾಳಬೇಕು ಎಂದು ಕಿವಿಮಾತು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವೀರಶೈವ ಗುರು ಪರಂಪರೆ ಬೆಳೆಸಿದ 92ನೇ ವಯಸ್ಸಿನ ಹುಮನಾಬಾದ್ ತಾಲ್ಲೂಕಿನ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗೆ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಸ್ವಾಮೀಜಿ ಶುಭ ಹಾರೈಸಿದರು.