ಶಿವಮೊಗ್ಗ: ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಗುರುವಾರ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತಾಲ್ಲೂಕಿನ ಗಾಜನೂರು ಬಳಿಯ ಸಕ್ರೆಬೈಲಿನಲ್ಲಿರುವ ಆನೆ ಬಿಡಾರದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಣ್ಣು ವಿತರಿಸಿದರು. ಸಿಸಿಎಫ್ ರವಿಶಂಕರ್, ಡಿಎಫ್ಒ ಐ.ಎಂ.ನಾಗರಾಜ್, ಆರ್ಎಫ್ಒ ಮಂಜುನಾಥ್, ವೈದ್ಯಾಧಿಕಾರಿ ಡಾ.ವಿನಯ್ ಆನೆಗಳ ಮಾವುತರು, ಕವಾಡಿಗಳು ಇದ್ದರು.
ಆನೆಗಳ ಕ್ರೀಡಾಕೂಟ ರದ್ದು: ಪ್ರತಿ ವರ್ಷ ಆನೆಗಳ ದಿನಾಚರಣೆ ಸಂದರ್ಭದಲ್ಲಿ ಆನೆಗಳ ಕ್ರೀಡಾಕೂಟ ಆಯೋಜಿಸಲಾಗುತ್ತಿತ್ತು. ಈ ವೇಳೆ ಆನೆಗಳ ಆಟೋಟ ಸ್ಪರ್ಧೆಗಳು ನಡೆಯುತ್ತಿದ್ದವು. ಇದನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಬಿಡಾರಕ್ಕೆ ಜನರು ಬರುತ್ತಿದ್ದರು. ಆದರೆ, ಕೋವಿಡ್ ಕಾರಣದಿಂದ ಈ ಬಾರಿ ಆನೆಗಳ ಕ್ರೀಡಾಕೂಟವನ್ನು ಇಲಾಖೆ ರದ್ದುಗೊಳಿಸಿದೆ.
ನಟಿ ತಾರಾ ಭೇಟಿ: ಆನೆ ಹಬ್ಬದ ಅಂಗವಾಗಿ ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರಕ್ಕೆ ನಟಿ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ ಭೇಟಿ ನೀಡಿದ್ದರು.
ಆನೆಗಳಿಗೆ ಪೂಜೆ ಸಲ್ಲಿಸಿ, ಹಣ್ಣುಗಳನ್ನು ನೀಡಿದರು. ಇನ್ನು, ಆನೆ ಬಿಡಾರದ ಮಾವುತ, ಕಾವಾಡಿಗಳಿಗೆ ಒದಗಿಸುತ್ತಿರುವ ಸೌಲಭ್ಯ, ಆನೆಗಳ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.