ಶಿಕಾರಿಪುರ: ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಮೇ 26ರಂದು ಸಂಜೆ 4ಕ್ಕೆ ಜೈ ಹನುಮಾನ್ ಯುವಕರ ಬಳಗದ ಸಹಯೋಗದಲ್ಲಿ ಒಂದು ದಿನದ ರಾಜ್ಯಮಟ್ಟದ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜೈ ಹನುಮಾನ್ ಯುವಕರ ಬಳಗದ ಅಧ್ಯಕ್ಷ ನಗರದ ಮಾಲತೇಶ್ ತಿಳಿಸಿದರು.
ಪಟ್ಟದಲ್ಲಿ ಈಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಕ್ರೀಡೆ ಕುಸ್ತಿಯನ್ನು ಉಳಿಸಿ ಬೆಳೆಸಲು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಯ 25 ಪುರುಷ ಹಾಗೂ ಮಹಿಳಾ ಕುಸ್ತಿ ಪೈಲ್ವಾನರ ಜೋಡಿಗಳು ಕುಸ್ತಿ ಪ್ರದರ್ಶನ ನೀಡಲಿವೆ. ವಿಜೇತ ಪೈಲ್ವಾನರಿಗೆ ಪ್ರಥಮ ಬಹುಮಾನ ಬೆಳ್ಳಿಗದೆ ಹಾಗೂ ನಗದು ₹ 20 ಸಾವಿರ, ದ್ವಿತೀಯ ಬಹುಮಾನ ಬೆಳ್ಳಿಗದೆ ಹಾಗೂ ನಗದು ₹ 15 ಸಾವಿರ, ತೃತೀಯ ಬಹುಮಾನ ಬೆಳ್ಳಿಗದೆ ಹಾಗೂ ನಗದು ₹ 15 ಸಾವಿರ ವಿತರಿಸಲಿದ್ದೇವೆ’ ಎಂದರು.
ಕುಸ್ತಿ ಪಂದ್ಯಾವಳಿಯನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಮಾಲತೇಶ್, ಡಾ.ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ, ಕಬಾಡಿ ರಾಜಪ್ಪ, ಟಿ.ಎಸ್. ಮೋಹನ್, ಹುಲ್ಮಾರ್ ಮಹೇಶ್, ಎನ್. ಈರೇಶ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡು ವೀಕ್ಷಿಸುವ ಮೂಲಕ ಪಂದ್ಯಾವಳಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಪೈಲ್ವಾನ್ ಸಂದಿಮನಿ ರಾಜಪ್ಪ, ಜೈ ಹನುಮಾನ್ ಯುವಕರ ಬಳಗದ ಉಪಾಧ್ಯಕ್ಷ ಕಲ್ಲುಕೊಪ್ಪ ಮುರಳೀಧರ್, ಕಾರ್ಯದರ್ಶಿ ಹರಳೆಣ್ಣೆ ತಮ್ಮಣ್ಣ, ಸಹಕಾರ್ಯದರ್ಶಿ ಅವಿನಾಶ್, ಖಜಾಂಚಿ ಮಂಜುನಾಥ್, ಪದಾಧಿಕಾರಿಗಳಾದ ನಗರದ ರವೀಂದ್ರಕುಮಾರ್ ಕಿಟ್ಟಿ, ಗೊಲ್ಲರ್ ದುರ್ಗೇಶ್, ಆಯುನೂರು ಮಂಜು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.