ಶಿವಮೊಗ್ಗ: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಜಿಲ್ಲೆಯ ಜನರು ಕಂಬನಿ ಮಿಡಿದರು. ವಿವಿಧ ಸಂಸ್ಥೆಗಳು, ಸಹಕಾರ ಸಂಘಗಳು, ಸಂಘಟನೆಗಳು, ರಾಜಕೀಯ ಪಕ್ಷಗಳು ಸಭೆಗಳನ್ನು ನಡೆಸಿ ಸಂತಾಪ ಸೂಚಿಸಿದರು.
ಜಿಲ್ಲಾ ಬಿಜೆಪಿ:
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂತಾಪ ಸಭೆ ನಡೆಸಿ, ಸಂತಾಪ ಸೂಚಿಸಲಾಯಿತು.
ಬಿಜೆಪಿ ಮುಖಂಡ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ‘ಸೇವೆಗೆ ಇನ್ನೊಂದು ಹೆಸರೇ ಸಿದ್ದಗಂಗಾ ಮಠದ ಡಾ.ಶಿವಕುಮಾರ ಶ್ರೀಗಳು. ಅವರು ತ್ರಿವಿಧ ದಾಸೋಹದ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದರು. ಅವರು ಮಾತನಾಡಿದ್ದು ಕಡಿಮೆ. ಕಾಯಕ ಮಾಡಿದ್ದು ಜಾಸ್ತಿ. ಯಾವ ರೀತಿ ನಡೆಯಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಜನರಿಗೆ ಮಾರ್ಗದರ್ಶನ ನೀಡುವುದರ ಜತೆಗೆ, ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯನ್ನು ಶಿಕ್ಷಣದ ಮೂಲಕ ಪಸರಿಸಿದ್ದಾರೆ’ ಎಂದರು.
ಶ್ರೀಗಳು ಗುರುಪೀಠಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯತಿಗಳು ಯಾವ ರೀತಿಯಲ್ಲಿ ಬದುಕು ನಡೆಸಬೇಕು ಎಂಬುದನ್ನು ಎಲ್ಲ ಮಠಮಾನ್ಯಗಳಿಗೆ ಮಾದರಿಯಾಗಿ ತೋರಿಸಿದವರು. ಅವರದ್ದು ರಾಷ್ಟ್ರಕ್ಕೆ ಸಮರ್ಪಿತವಾದ ವ್ಯಕ್ತಿತ್ವವಾಗಿತ್ತು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ಮುಂದೆಯೂ ಕೂಡ ಸಿದ್ದಗಂಗಾ ಮಠದಲ್ಲಿ ಅವಿರತವಾಗಿ ತ್ರಿವಿಧ ದಾಸೋಹ ಮುಂದುವರೆಯಲಿದೆ. ಅವರು ತೋರಿಸಿದ ದಾರಿಯಲ್ಲಿ ನಡೆದರೆ ನಾವು ಅವರಿಗೆ ನೀಡುವ ದೊಡ್ಡ ಶ್ರದ್ದಾಂಜಲಿ ಎಂದರು.
ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ಪದ್ಮನಾಭ ಭಟ್, ಮೇಯರ್ ಲತಾ ಗಣೇಶ್, ಮಾಜಿ ಶಾಸಕ ಕುಮಾರಸ್ವಾಮಿ, ಎನ್.ಜೆ.ರಾಜಶೇಖರ್, ಡಿ.ಎಸ್.ಅರುಣ್ ಇದ್ದರು.
ಜಿಲ್ಲಾ ಕಸಾಪ:
ಜಿಲ್ಲಾ ಸ್ವಯಂ ಸೇವಕರ ಸಂಘಗಳ ಒಕ್ಕೂಟ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದಲೂ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ನಗರದ ಕಸಾಪ ಕಚೇರಿ ಮುಂಭಾಗ ಶ್ರದ್ಧಾಂಜಲಿ ಸಭೆ ನಡೆಸಿ, ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೆ.ಸಿ.ಬಸವರಾಜ್, ಪ್ರಮುಖರಾದ ರುದ್ರಮುನಿ ಸಜ್ಜನ್, ಬಸವರಾಜಪ್ಪ, ನಟರಾಜ್, ಕಾಮ್ರೆಡ್ ಲಿಂಗಪ್ಪ ಇದ್ದರು.
ಸಹ್ಯಾದ್ರಿ ಸ್ನೇಹ ಬಳಗ:
ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಸಹ್ಯಾದ್ರಿ ಸ್ನೇಹ ಬಳಗ, ಕ್ರೀಡಾಭಿಮಾನಿಗಳು ಮತ್ತು ಕ್ರೀಡಾಪಟುಗಳು ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವಿಶ್ವನಾಥ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಡಾ.ಸತೀಶ್ ಕುಮಾರ್ ಶೆಟ್ಟಿ, ಬಳ್ಳೆಕೆರೆ ಸಂತೋಷ್, ರಾಜೇಶ್ ಕಾಮತ್, ಪಿ.ರುದ್ರೇಶ್, ಅಶೋಕ್ ಇದ್ದರು.
ಅರವಿಂದ ನಗರ ನಿವಾಸಿಗಳ ಸಂಘ:
ಅರವಿಂದ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದಲೂ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ನಿವಾಸಿಗಳ ಸಂಘದ ಹಿರಿಯರು ಆಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್, ಸಂಘದ ಅಧ್ಯಕ್ಷ ಎಸ್.ತಂಗರಾಜ್, ಉಪಾಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಂ.ರವಿಕುಮಾರ್, ಎಲ್.ಕೆ.ನಾಗರಾಜ್, ಟಿ.ವಿ.ನಾಗರಾಜ್, ಚರಂತಿಮಠ ನಾಗರಾಜ್, ದತ್ತಾತ, ನೇತ್ರಾವತಿ, ಚಂದ್ರಮ್ಮ, ಮಂಜಮ್ಮ ಇದ್ದರು.
ವಿನಾಯಕ ನಗರ ನಿವಾಸಿಗಳು:
ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಮುಂಭಾಗದ ಅಕ್ಕಮಹಾದೇವಿ ವೃತ್ತದಲ್ಲಿ ವಿನಾಯಕ ನಗರ ನಿವಾಸಿಗಳು ಸಿದ್ಧಗಂಗಾ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ರೋಟರಿ ಶಿವಮೊಗ್ಗ ಪೂರ್ವ:
ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ವಿದ್ಯಾಸಂಸ್ಥೆ ಮತ್ತು ಇಂಟ್ರ್ಯಾಕ್ಟ್ ಕ್ಲಬ್ನಿಂದ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಗಳು ಧಾರ್ಮಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿ ಈ ನಾಡಿಗೆ ಎಂದೂ ಮರೆಯದ ಅವಿಸ್ಮರಣೀಯ ಸ್ವಾಮೀಜಿ ಎಂದು ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಲ್. ರವಿ ಬಣ್ಣಸಿದರು.
ವಿದ್ಯಾಸಂಸ್ಥೆಯ ಕೆ.ಬಿ.ರವಿಶಂಕರ್, ಜಿ.ವಿಜಯಕುಮಾರ್, ಚಂದ್ರಶೇಖರಯ್ಯ, ಎಸ್.ಸಿ.ರಾಮಚಂದ್ರ, ಎನ್.ಪಿ.ನಾಗರಾಜ್, ರಾಮಪ್ಪಗೌಡ, ವಿಶಾಲಾಕ್ಷಮ್ಮ, ಶಬರಿಕಡಿದಾಳ್, ವೇದಾನಾಗರಾಜ್, ಪುರುಷೋತ್ತಮ್, ಮಧುರ ಮಹೇಶ್ ಇದ್ದರು.
ಎಲ್ಎಲ್ಆರ್ ರಸ್ತೆಯಲ್ಲಿರುವ ಸ್ನೇಹಮಹಿ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಚಿನ್ನಪ್ಪ ಮಾತನಾಡಿ, ಸ್ವಾಮೀಜಿ ಅವರ ಆದರ್ಶ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳು ಮತ್ತು ಅವರ ಕೊಡುಗೆ ಈ ಜಗತ್ತಿಗೆ ಅವಿಸ್ಮರಣೀಯ ಎಂದರು.
ಕಂಚಿ ಕಾಮಾಕ್ಷಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಲ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಶ್ರೀಗಳ ಗೌರವಾರ್ಥ ಮೌನಾಚರಣೆ ನಡೆಸಿ, ಶ್ರದ್ಧಾಂಜಲಿ ಅರ್ಪಿಸಿದರು.
ಪದವೀಧರರ ಸಹಕಾರ ಸಂಘ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಪಿ.ದಿನೇಶ್ ನೇತೃತ್ವದಲ್ಲಿ ಸಭೆ ನಡೆಸಿ ಮೌನಾಚರಣೆ ನಡೆಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಶಿವಮೊಗ್ಗ ಹೌಸಿಂಗ್ ಸೊಸೈಟಿ:
ಶಿವಮೊಗ್ಗ ಕೋ- ಆಪರೇಟಿವ್ ಹೌಸಿಂಗ್ ಸೊಸೈಟಿ ಅಧ್ಯಕ್ಷ ಎನ್. ಉಮಾಪತಿ ನೇತೃತ್ವದಲ್ಲಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರೀರಾಮ ಮತ್ತು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ರಾಜೇಂದ್ರ ನಗರದ ಪಂಪಾವನದಲ್ಲಿ ಭಕ್ತರು ಸಭೆ ಸೇರಿ ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ಬಿ.ಜಿ.ಶಿವಮೂರ್ತಿ, ಪರಪ್ಪನವರ್, ಲಿಂಗಪ್ಪ, ಉದಯ ಕುಮಾರ್, ಸಾಹಿ ಗಂಗಾಧರ್ ಇದ್ದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶ್ರದ್ಧಾಂಜಲಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.