ರ್ಯಾಪಿಡ್ ರಶ್ಮಿ ಜತೆ ನಡೆಸಿದ ಸಂದರ್ಶನದಲ್ಲಿ ನಿರೂಪ್ ಮತ್ತು ಅನೂಪ್ ಭಂಡಾರಿಯವರು ನೀಡಿದ ಉತ್ತರದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವಿವಾದ ಸೃಷ್ಟಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಆಕ್ರೋಶ ವ್ಯಕ್ತವಾದಾಗ ಅನೂಪ್ ಭಂಡಾರಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಕೋರಿದರು.
ಸಂದರ್ಶನ ಮಾಡಿದ ರ್ಯಾಪಿಡ್ ರಶ್ಮಿ ಹಾಗೂ ನಟಿ ಆವಂತಿಕಾ ಶೆಟ್ಟಿ ಅವರೂ ಕ್ಷಮೆ ಕೇಳಬೇಕೆಂಬ ಆಗ್ರಹವೂ ಕೇಳಿಬಂತು. ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ರಶ್ಮಿಗೆ ಬಾಯಿ ಬಡಕಿ, ಸ್ವಲ್ಪ ತಿದ್ಕೋ, ಎಡವಿದ್ದಿಯ, ಪ್ರಚೋದಿಸ್ತೀಯಾ, ತಿದ್ಕೋ ಎಂದೂ ಕಮೆಂಟ್ಗಳು ಬಂದಿದ್ದವಂತೆ. ತಮ್ಮ ವಿರುದ್ಧ ಹರಿದುಬಂದ ಕಮೆಂಟ್ಗಳಿಗೆ ರ್ಯಾಪಿಡ್ ರಶ್ಮಿ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಉತ್ತರ ನೀಡಿದ್ದಾರೆ. ಅವರ ಬರಹದ ಸಂಕ್ಷಿಪ್ತ ರೂಪ ಇಲ್ಲಿದೆ.
***
11 ವರುಷದ ಕೆರಿಯರ್ನಲ್ಲಿ ನನ್ನ ಮಾತಿನ ಧಾಟಿ, ಹಾಸ್ಯ ಪ್ರಜ್ಞೆ, ತರಲೆ ಮಾತು, ಬೋಲ್ಡ್ ಆಗಿ ಮಾತಾಡಿದಾಗ ಬೆನ್ನು ತಟ್ಟಿದ್ದೀರಿ. ಒಬ್ಬರ ಶೈಲಿ ಇಷ್ಟ ಪಡೋದು, ಪಡದೆ ಇರೋದಕ್ಕೆ ನೀವು ಸ್ವತಂತ್ರರು. ಸಂದರ್ಶನದಲ್ಲಿ ನಾನು ತಪ್ಪು ಪ್ರಶ್ನೆ ಕೇಳಿಲ್ಲ ಎಂಬುದು ನನ್ನ ಭಾವನೆ. ಆದರೆ ಅವರು ಕೊಡುವ ಉತ್ತರಗಳ ಮೇಲೆ ನನಗೆ ನಿಯಂತ್ರಣವಿಲ್ಲ. ಒಳ್ಳೇ ಸಿನಿಮಾ ಮಿಸ್ ಮಾಡಿಕೊಳ್ಳೋರು, ಬ್ಯುಸಿ ಇರೋರು, ಕನ್ನಡ ಬರದಿದ್ದವರು, ಕನ್ನಡ ಸಿನಿಮಾಗಳನ್ನು ಬೆಳಸದೆ ಇರೋರು... ಇತ್ಯಾದಿ ಇತ್ಯಾದಿ ಉತ್ತರ ಕೊಡಬಹುದಿತ್ತು.
ನಾನು ಯಾರಿಗೂ ಹಾಗೆ ಉತ್ತರ ಕೊಡಲು ಪ್ರಚೋದಿಸಿಲ್ಲ, ಅವರವರ ಮಾತಿಗೆ, ಅಭಿಪ್ರಾಯಕ್ಕೆ ಅವರೇ ಜವಾಬ್ದಾರರು. ಇನ್ನು ಅದೇ ರೌಂಡ್ನಲ್ಲಿ ರಾಜರಥ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡೋರು ಎಂಬ ಪ್ರಶ್ನೆಗೆ ಅನೂಪ್ ಅವರೇ ದೇವತೆಗಳು, ದೇವರುಗಳು ಅಂತ ಹೇಳಿದ್ದಾರೆ. ಇಷ್ಟೆಲ್ಲಾ ಬೇಕು ಬೇಕು ಅಂತ ಆಗಿದ್ದಲ್ಲ. ಎಡವಟ್ಟಾಗಿದೆ, ಕ್ಷಮೆ ಇರಲಿ.
ವೈರಲ್ ಆಗಿರುವ ವಿಡಿಯೊ ತುಣುಕು ಎಡಿಟೆಡ್ ವಿಡಿಯೊ. ನನ್ನ ಫೇಸ್ಬುಕ್ ಖಾತೆಯಲ್ಲಿ 7 ನಿಮಿಷದ ಸಂಪೂರ್ಣ ವಿಡಿಯೊ ಇದೆ. ಮುಂದೆಯೂ ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ಧಕ್ಕೆ ಬಾರದ ಹಾಗೆ ನಡೆಯುವೆ.
-ಇಂತಿ ನಿಮ್ಮ ರ್ಯಾಪಿಡ್ ರಶ್ಮಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.