ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ಹೊಸನಗರ ಚೆಕ್ಪೋಸ್ಟ್ ಬಳಿ ಈಚೆಗೆ ದೊರೆತ ₹ 2 ಕೋಟಿ ಹಣ ಗ್ರಾಮೀಣ ಬ್ಯಾಂಕ್ಗೆ ಸೇರಿದ್ದು ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಆಶ್ವಿನಿ ಮಾಹಿತಿ ನೀಡಿದರು.
ಬ್ಯಾಂಕ್ ಅಧಿಕಾರಿಯೊಬ್ಬರು ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಣೆ ಮಾಡುವಾಗ ತಪಾಸಣಾ ಕೇಂದ್ರದ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ₹ 10 ಲಕ್ಷಕ್ಕಿಂತ ಮೇಲಿದ್ದ ಕಾರಣ ಜಿಲ್ಲಾ ಚುನಾವಣಾಧಿಕಾರಿ ಹಣವನ್ನು ಐಟಿ ಅಧಿಕಾರಿಗಳಿಗೆ ವಹಿಸಿದ್ದರು.
3.42 ಲಕ್ಷ ವಶ:
ಸೋಮವಾರ ವಿವಿಧ ವಾಹನಗಳಲ್ಲಿ ಸಾಗಿಸುತ್ತಿದ್ದ ₹ 3.42 ಲಕ್ಷ ವಶಕ್ಕೆ ಪಡೆಯಲಾಗಿದೆ. ಕೂಡ್ಲಿಗೆರೆ ಕಾರಿನಲ್ಲಿ ₹ 1.20, ಕ್ಯಾಂಟರ್ನಲ್ಲಿ ₹ 90 ಸಾವಿರ, 407 ₹ 72 ಸಾವಿರ, ಬಿಆರ್ಪಿ ಬಳಿ ₹ 60 ಸಾವಿರ ವಶಪಡಿಸಿಕೊಳ್ಳಲಾಗಿದೆ ಎಂದು ಅಶ್ವಿನಿ ವಿವರ ನೀಡಿದರು.
362 ಸೂಕ್ಷ್ಮ ಮತಗಟ್ಟೆಗಳು:
ಜಿಲ್ಲೆಯಲ್ಲಿ 1,775 ಮತಗಟ್ಟೆಗಳಿವೆ. ಅವುಗಳಲ್ಲಿ 362 ಸೂಕ್ಷ್ಮ ಮತಗಟ್ಟೆಗಳು, ಶಿವಮೊಗ್ಗ 82, ಭದ್ರಾವತಿ 81 ಸೂಕ್ಷ ಎಂದು ಗುರುತಿಸಲಾಗಿದೆ ಎಂದರು.
400 ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಬ್ಬರಿಗೆ ಗಡಿಪಾರು ಶಿಕ್ಷೆ ನೀಡಲಾಗಿದೆ. 5,188 ಶಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 80 ಯೋಧರ ಒಂದು ಬಿಎಸ್ಎಫ್ ತುಕಡಿ ಈಗಾಗಲೇ ಜಿಲ್ಲೆಗೆ ಬಂದಿದೆ. ಸೂಕ್ಷ್ಮ ಮತಗಟ್ಟೆಗಳ ಪ್ರದೇಶದಲ್ಲಿ ಪಥ ಸಂಚಲನ ನಡೆಸಲಾಗಿದೆ. ಎಲ್ಲೆಡೆ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.
ಪ್ರವಾಸಿ ತಾಣಗಳ ಮೇಲೆ ನಿಗಾ
ಲೋಕಸಭಾ ಚುನಾವಣೆಯ ಮತದಾನದ ದಿನ ಪ್ರವಾಸಿ ತಾಣಗಳಲ್ಲಿ ಹೊಟೆಲ್, ರೆಸಾರ್ಟ್, ವಸತಿ ಗೃಹಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸು ಮೊದಲು ದಾಖಲೆ ಪರಿಶೀಲಿಸಬೇಕು. ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶ ಹೊರಡಿಸಿದ್ದಾರೆ.