ಕೆ.ಆರ್.ಪುರ: ಸದನದಲ್ಲಿ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಸ್ವಾಗತಿಸಿ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಕೆ.ಆರ್.ಪುರದ ಯರ್ರಯ್ಯನಪಾಳ್ಯದ ಕೋಡಂದರಾಮ ಸ್ವಾಮಿ ದೇವಾಲಯದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿ,'ದೇಶದಲ್ಲಿ ಅನಾದಿ ಕಾಲದಿಂದಲೂ ಗೋವುಗಳನ್ನು ಅತ್ಯಂತ ಗೌರವದಿಂದ ಪೂಜಿಸಲಾಗುತ್ತಿದೆ. ಗೋಮಾತೆ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾಗಿದ್ದು ಸಂತಸ ತಂದಿದೆ. ಕ್ಷೇತ್ರದ ಪ್ರತಿ ವಾರ್ಡ್ ಗಳಲ್ಲಿ ಗೋಪೂಜೆ ಮೂಲಕ ಜನ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ' ಎಂದರು.
'ಜೀವನ ನಿರ್ವಹಣೆಗೆ ಹೆಚ್ಚಿನ ಕುಟುಂಬಗಳು ಗೋವುಗಳ ಮೇಲೆ ಅವಲಂಬಿಸಿವೆ. ದೇಶದ ಪ್ರತಿಯೊಬ್ಬ ಗೋವನ್ನು ಪೂಜನೀಯ ಭಾವನೆಯಿಂದ ನೋಡುವ ಪ್ರವೃತ್ತಿ ಇದೆ. ಇಂತಹ ಹೆಮ್ಮೆ ತರುವ ಮಸೂದೆಗೆ ಬಹುಮತ ಸಿಕ್ಕಿದೆ. ಹಸುಗಳ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲು ಸರ್ಕಾರ ನಿರ್ಣಯಿಸಿದೆ. ಅವುಗಳನ್ನು ಸರ್ಕಾರವೇ ನಿರ್ವಹಣೆ ಮಾಡಲು ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಬದ್ದರಾಗಿದ್ದೇವೆ' ಎಂದು ಹೇಳಿದರು.