ಕುದೂರು (ಮಾಗಡಿ): ‘ಯುಗಯೋಗಿ ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವಿತದ ಅವಧಿಯಲ್ಲಿ ನಾವುಗಳು ಬದುಕಿರುವುದು ನಮ್ಮೆಲ್ಲರ ಪುಣ್ಯ’ ಎಂದು ಕುದೂರು ಕೆ.ಎ.ನೀಲಮ್ಮ ಸತ್ಯನಾರಾಯಣ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಬಿ.ವಿಜಯಗುಪ್ತ ಅಭಿಪ್ರಾಯಪಟ್ಟರು.
ಕುದೂರಿನ ಸಂತೆ ಸರ್ಕಲ್ನಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ‘ಸಾಮೂಹಿಕ ಅನ್ನದಾಸೋಹ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿದ್ಧಗಂಗಾ ಶ್ರೀಗಳು ನಾಡಿನ ಜನರಿಗೆ ತಾಯಿಯಂತಿದ್ದರು. ಹಸಿದು ಬಂದವರಿಗೆ ಅನ್ನನೀಡುವುದೇ ನಿಜವಾದ ಮಾನವ ಧರ್ಮ ಎಂದು ನಮಗೆಲ್ಲರಿಗೂ ಮಾರ್ಗದರ್ಶನ ನೀಡಿದ ಮಹಾನುಭಾವರ ಆದರ್ಶ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಬದುಕಲು ಸಲಹೆ ನೀಡಿದರು.
ಸುಮಾ ವಿಜಯಗುಪ್ತ ಮಾತನಾಡಿ, ಸ್ವಾಮೀಜಿ ಅವರ ಜನ್ಮಸ್ಥಳ ವೀರಾಪುರವನ್ನು ಅಂತರರಾಷ್ಟ್ರೀಯ ಮಹತ್ವದ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅರವಿಂದ್, ಉಮೇಶ್, ಕುಮಾರ, ಪ್ರವೀಣ್, ನಾಗರಾಜು, ಲೋಕೇಶ್, ಗ್ರಾಮಸ್ಥರು ಇದ್ದರು.