ಚನ್ನಪಟ್ಟಣ: ‘ಇಂದಿನ ದಿನಗಳಲ್ಲಿನ ಸಿನಿಮಾ, ಧಾರಾವಾಹಿಗಳು ಜನರಲ್ಲಿ ಮೂಢನಂಬಿಕೆ ಬಿತ್ತುವ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿವೆ’ ಎಂದು ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ಸಿ. ವೀರೇಗೌಡ ವಿಷಾದಿಸಿದರು.
ಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಶ್ರೀ ಕಬ್ಬಾಳಮ್ಮ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ದಕ್ಷಯಜ್ಞ ನಾಟಕ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದರು.
ಪೌರಾಣಿಕ ನಾಟಕಗಳು ಈ ಹಿಂದೆ ವೀಕ್ಷಕರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದ್ದವು, ನಾಟಕದಲ್ಲಿನ ಅಂಶಗಳನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳುತ್ತಿದ್ದರು ಎಂದರು.
ಪೌರಾಣಿಕ ನಾಟಕಗಳಲ್ಲಿನ ನೀತಿ, ಧರ್ಮ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದವು. ಅಲ್ಲಿನ ಪಾತ್ರಗಳನ್ನು ಸ್ವತಃ ಜನ ಆರಾಧನೆ ಮಾಡುತ್ತಿದ್ದರು. ಅಂತಹ ನಾಟಕಗಳು ಇಂದಿನ ದಿನಗಳಲ್ಲಿ ಮರೆಯಾಗುತ್ತಿದ್ದು, ಕಲಾವಿದರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ ಎಂದರು.
ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಾಣ ಮಾಡಿ, ಕಲಾವಿದರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಅನುದಾನ ಪಡೆದು ರಂಗಮಂದಿರ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಟೆಕೀಸ್ ಟೀಂ ಅಧ್ಯಕ್ಷೆ ಆರ್. ನವ್ಯಶ್ರೀ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರೋತ್ಸಾಹದ ಕೊರತೆಯಿಂದಾಗಿ ನಾಟಕ ಪ್ರದರ್ಶನಗಳು ಕಡಿಮೆಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಕಲಾವಿದರು ಹಬ್ಬ, ಹರಿದಿನಗಳಲ್ಲಿ ತಮ್ಮ ಗ್ರಾಮಗಳಲ್ಲೆ ನಾಟಕ ಆಯೋಜಿಸುತ್ತಿದ್ದರು. ಆ ಇತಿಹಾಸ ಮರುಕಳಿಸಬೇಕು ಎಂದರು.
ನಾಟಕ ಪ್ರದರ್ಶನಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಅನುದಾನ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.
ನಾಟಕದಲ್ಲಿ ಅಭಿನಯಿಸಿದ ಕಲಾವಿದರು, ನಿರ್ದೇಶಕರು ಹಾಗೂ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರ, ಎಸ್.ಸಿ. ಶೇಖರ್, ಸಿದ್ದರಾಮಣ್ಣ, ಡಾ. ರಾಜ್ ಕಲಾ ಬಳಗದ ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆ.ಟಿ. ಲಕ್ಷ್ಮಮ್ಮ, ನಾಟಕದ ವ್ಯವಸ್ಥಾಪಕ ರಾಜೇಶ್ ರಾಜ್ ಇದ್ದರು.