ಶಿವಮೊಗ್ಗ: ಸಹಿಷ್ಣುತೆ ಹಾಗೂ ಸಾಮರಸ್ಯದ ಬದುಕು ನಡೆಸುವ ವಾತಾವರಣ ಸೃಷ್ಟಿಸುವ ತುರ್ತು ಅಗತ್ಯವಿದೆ ಎಂದು ಧರ್ಮಗುರು ಅಬ್ದುಲ್ ಲತೀಫ್ ಮೌಲಾನ ಪ್ರತಿಪಾದಿಸಿದರು.
ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವದ ಅಂಗವಾಗಿ ಸೋಮಿನಕೊಪ್ಪದಲ್ಲಿ ಶನಿವಾರ ಹಮ್ಮಿಕೊಂಡ ಪ್ರಭಾತ್ ಪೇರಿ ಕಾರ್ಯಕ್ರಮದ ಬಳಿಕ ಆಂಜನೇಯ ಸ್ವಾಮಿ–ಯಲ್ಲಮ್ಮ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಪವಿತ್ರ ದೇಶ. ಧಾರ್ಮಿಕ ಸಹಿಷ್ಣುತೆಗೆ ಎಲ್ಲಾ ದೇಶಗಳಿಗೂ ಮಾದರಿಯಾಗಿದೆ. ವಿವಿಧತೆಯ ನಡುವೆ ಏಕತೆ ಇದೆ. ಎಲ್ಲಾ ಧರ್ಮದವರೂ ಒಂದೇ ತೋಟದ ಹೂವುಗಳಂತೆ ಜೀವಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಎಲ್ಲಾ ಧರ್ಮಗಳಿಗೂ ಶಾಂತಿ, ಸಮಾಧಾನವೇ ಪ್ರಮುಖ ಮಂತ್ರ. ಇಸ್ಲಾಂ ಎಂದರೆ ಶಾಂತಿ ಮತ್ತು ಸಮಾಧಾನ ಎಂದು ಅರ್ಥ. ವಿವಿಧ ಜಾತಿ, ಧರ್ಮಗಳು ಒಂದೆಡೆ ನೆಲೆಸಿದರೆ ಆ ಊರಿನ ಸೌಂದರ್ಯ ಹೆಚ್ಚುತ್ತದೆ. ಸಹಿಷ್ಣುತೆ, ಸಾಮರಸ್ಯದ ಅವರ ಜೀವನ ಧ್ಯೇಯವಾಗಬೇಕು ಎಂದರು.
ಮೂಡಿ ಮಠದ ಸದಾಶಿವಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಎಲ್ಲ ಮನೆಗಳ ಮುಂದೆಯೂ ರಂಗೋಲಿ ಬಿಡಿಸಲಾಗಿತ್ತು. ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತ ಕೋರಿದರು.
ಸುತ್ತೂರು ಶ್ರೀ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಸ್ವಾಮೀಜಿ , ಶಾಸಕ ಎಸ್. ರುದ್ರೇಗೌಡ, ಪಾಲಿಕೆ ಸದಸ್ಯೆ ಆಶಾ ಚಂದ್ರಪ್ಪ ಉಪಸ್ಥಿತರಿದ್ದರು.