ಶಿವಮೊಗ್ಗ: ಸುತ್ತೂರು ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತಿ ಮಹೋತ್ಸವ ಅಂಗವಾಗಿ ಅಲ್ಲಮಪ್ರಭು ಬಯಲಿನಲ್ಲಿ(ಹಳೇ ಜೈಲು ಮೈದಾನ) ಆಯೋಜಿಸಿರುವ ವಸ್ತುಪ್ರದರ್ಶನ ಜನರ ಆಕರ್ಷಣೆಯ ತಾಣವಾಗಿದೆ.
ವೇದಿಕೆಯ ಎಡ ಭಾಗದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ವೈವಿಧ್ಯಮಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೀಕ್ಷಿಸಲು, ಖರೀದಿಸಲು ಎರಡನೆ ದಿನ ಜನಸಾಗರವೇ ಹರಿದು ಬಂದಿತ್ತು.
ಕೃಷಿ-ತಂತ್ರ ಜ್ಞಾನ, ಮಾಹಿತಿ, ಕೃಷಿ ಸಾಮಗ್ರಿಗಳ ಮಾರಾಟಕ್ಕೆಅಧಿಕಮಳಿಗೆಗಳನ್ನು ಮೀಸಲಿಡಲಾಗಿದೆ.ವಿವಿಧ ಬೆಳೆಗಳ ತಳಿಗಳು, ಬೀಜ, ಗೊಬ್ಬರ ಮತ್ತಿತರ ಮಾಹಿತಿ ನೀಡಲಾಗುತ್ತಿದೆ. ಸಾವಯವ ಕೃಷಿ ಉತ್ಪನ್ನಗಳ ಪರಿಚಯ ಹಾಗೂ ಮಾಹಿತಿ ನೀಡುವ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಕೈಗಾರಿಕೆಗಳ ಉತ್ಪನ್ನ, ಮಾರಾಟಕ್ಕೂಪ್ರಾಶಸ್ತ್ಯ ನೀಡಲಾಗಿದೆ. ಈ ಮಳಿಗೆಗಳುಜಿಲ್ಲೆಯ ಕೈಗಾರಿಕೆ ಸಾಧನೆ ಬಿಂಬಿಸುತ್ತಿವೆ. ಎಲ್ಲ ಮಳಿಗೆಗಳು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೂ ಮಳಿಗೆಗಳು ತೆರೆದಿರುತ್ತವೆ.
ಗೇರು ಬೆಳೆ, ಅಡಿಕೆ, ತಾಳೆ, ತೆಂಗು, ವಿಭಿನ್ನ ಭತ್ತದ ತಳಿಗಳು, ಟ್ರ್ಯಾಕ್ಟರ್, ಟಿಲ್ಲರ್ಗಳು, ಸ್ಪೇರೊಕಾಸ್ಟ್ ಬಿಡಿಭಾಗಗಳು, ಖಾದಿ ಬಟ್ಟೆಗಳು, ಆಯುರ್ದೇದ ಔಷಧಗಳು, ಸಿದ್ಧ ಉಡುಪುಗಳು, ಆಧುನಿಕ ಶೈಲಿಯ ಬಳೆ ಸರಗಳು, ಮಣ್ಣಿನ ಆಧುನಿಕ ಪರಿಕರಗಳು ಗಮನ ಸೆಳೆದವು.ಆಹಾರ ಮಳಿಗೆಗಳಲ್ಲಿಪಾನಿಪೂರಿ, ಗೋಬಿ, ಮಂಡಕ್ಕಿ- ಮೆಣಸಿನಕಾಯಿ, ಗೋಬಿ, ಹಣ್ಣುಗಳು ಸೇರಿದಂತೆ ಇನ್ನಿತರ ತಿನಿಸುಗಳಸವಿಯಲು ಜನರು ಮುಗಿ ಬೀಳುತ್ತಿದ್ದರು.
ಗಮನ ಸೆಳೆದ ಗಾಂಧಿ ಪ್ರದರ್ಶನ:ಗಾಂಧಿಜಿ ಅವರ ಬದುಕಿನ ಕ್ಷಣಗಳ ಛಾಯಾಚಿತ್ರಗಳ ಪ್ರದರ್ಶನ ನೋಡುಗರ ಮನ ಸೂರೆಗೊಂಡಿತು. ಬಾಲ್ಯದಿಂದ ಹುತಾತ್ಮರಾಗುವವರೆಗೆ ಅವರ ಹೆಜ್ಜೆಯ ಪ್ರತಿ ಕ್ಷಣಗಳನ್ನೂ ಚಿತ್ರಗಳು ತೆರೆದಿಟ್ಟಿವೆ. ಸ್ವಾತಂತ್ರ್ಯಾ ಹೋರಾಟ, ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಭಾರತಬಿಟ್ಟು ತೊಲಗಿ ಹೋರಾಟದ ಚಿತ್ರಗಳು ಕಣ್ಣಮುಂದೆ ಸುಳಿಯುತ್ತವೆ.
ಚನ್ನಪಟ್ಟಣದ ಗೊಂಬೆಗಳು ಈ ವಸ್ತು ಪ್ರದರ್ಶನದ ಬಹುಮುಖ್ಯ ಆಕರ್ಷಣೆ. ಮಕ್ಕಳನನ್ನು ಅತಿಹೆಚ್ಚು ಸೆಳೆಯುತ್ತಿವೆ. ಮನೋರಂಜನಾ ವಿಭಾಗದಲ್ಲಿ ಟೊರಾಟೊರಾ, ಜಾಯಿಂಟ್ ವ್ಹೀಲ್, ಮಕ್ಕಳ ಕುದುರೆ ಆಕರ್ಷಣೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.