ವಿಜಯಪುರ: ‘ತ್ರಯೋದಶಯುಕ್ತ ತಾಂಬೂಲ ಸೇವನೆ ದೇಹದ ಆರೋಗ್ಯಕ್ಕೆ ಉತ್ತಮ’ ಎಂದು ಪಂಡಿತ ಮಧ್ವೇಶಾಚಾರ್ಯ ಮುತ್ತಗಿ ಅಭಿಪ್ರಾಯಪಟ್ಟರು.
ನಗರದ ನಂಜನಗೂಡು ರಾಯರಮಠದಲ್ಲಿ ಮಂತ್ರಾಲಯ ದಾಸ ಸಾಹಿತ್ಯ ಪ್ರೊಜೆಕ್ಟ್ ವಿಜಯಪುರ ಘಟಕದ ವತಿಯಿಂದ ಮಹಿಳಾ ಭಜನಾ ಮಂಡಳಿಗಳಿಗೆ ಹಮ್ಮಿಕೊಂಡಿದ್ದ ತಾಂಬೂಲ ಸ್ಪರ್ಧೆಯಲ್ಲಿ ಉಪನ್ಯಾಸ ನೀಡಿದ ಅವರು, ‘ಆಯುರ್ವೇದ ವೈದ್ಯ ಪವಮಾನ ಮುತ್ತಗಿ ವೀಳ್ಯದೆಲೆಸಹಿತ ತಾಂಬೂಲ 115 ರೋಗಗಳ ನಿಯಂತ್ರಣ ಮಾಡುತ್ತದೆ’ ಎಂದರು.
ನಂಜನಗೂಡು ರಾಯರಮಠದ ವಿಚಾರಣಾಕರ್ತಗೋಪಾಲ ನಾಯಕ, ‘ತಾಂಬೂಲ ಕುರಿತು ಇಂದಿನ ಮಹಿಳೆಯರು ಆಸಡ್ಡೆ ಭಾವ ಹೊಂದದೆ, ಅದರ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೂ ತಿಳಿಸಿ ಅದನ್ನು ಉಳಿಸಿಕೊಳ್ಳುವತ್ತ ಚಿತ್ತ ಹರಿಸಬೇಕು’ ಎಂದು ಸಲಹೆ ನೀಡಿದರು.
ಮಠದ ವ್ಯವಸ್ಥಾಪಕ ರವಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಭಜನಾ ಮಂಡಳಿಯನೂರಕ್ಕೂ ಹೆಚ್ಚು ಸಹೋದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೃಷ್ಣಾಜಿ ಕುಲಕರ್ಣಿ, ವಾಸುದೇವ ಕುಲಕರ್ಣಿ ಇದ್ದರು.