ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್

₹ 8 ಲಕ್ಷ ವಿದ್ಯುತ್ ಬಿಲ್ ಬಾಕಿ, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಬೆಸ್ಕಾಂ, ನೀರಿಗಾಗಿ ಗೋಳಾಡುತ್ತಿರುವ ಜನ
Last Updated 10 ಮೇ 2019, 7:24 IST
ಅಕ್ಷರ ಗಾತ್ರ

ತುಮಕೂರು: ಬಿಸಿಲಿನ ತಾಪಕ್ಕೆ ಕುಡಿಯುವ ನೀರಿಗೆ ಎಲ್ಲೆಡೆ ಪರದಾಟ. ಅದರಲ್ಲೂ ತುಮಕೂರು ಮಹಾನಗರದಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನೀರು ಕುಡಿದು ರೂಢಿಯಾದ ಬಳಿಕ ದಿನಪೂರ್ತಿ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಕ್ಯಾನ್ ಹಿಡಿದು ಜನರ ಸಾಲು ಸಾಲು!

ಇಂತಹ ಪರಿಸ್ಥಿತಿಯಲ್ಲಿ ನಗರದ 12 ಶುದ್ಧ ಕುಡಿಯುವ ನೀರಿನ ಘಟಕಗಳು ದಿಢೀರ್ ಬಂದ್ ಆಗಿದ್ದು! ಇವುಗಳನ್ನೇ ಆಶ್ರಯಿಸಿದ್ದ ಜನರು ನೀರಿಗಾಗಿ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಖಾಲಿ ಕ್ಯಾನ್‌ಗಳನ್ನು ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ.

ಗಂಟೆಗಟ್ಟಲೆ ನಿಂತು ನೀರು ಪಡೆದುಕೊಳ್ಳುತ್ತಿದ್ದಾರೆ. ಆದರೆ, ತಮ್ಮ ಬಡಾವಣೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇದ್ದಕ್ಕಿದ್ದಂತೆ ಏನಾಯ್ತು ಎಂಬ ಪ್ರಶ್ನೆಗೆ ನಾನಾ ರೀತಿಯ ಉತ್ತರಗಳು ಸಿಗುತ್ತಿವೆ.

ಅಯ್ಯೊ ಈ ಘಟಕಗಳು ಅನಧಿಕೃತ ಅಂತೆ. ಇನ್ನು ಮುಂದೆ ಕಾಯಂ ಬಂದ್ ಅಂತೆ. ಕರೆಂಟ್ ಬಿಲ್ ಕಟ್ಟಿಲ್ಲವಂತೆ– ಹೀಗೆ ನಾನಾ ರೀತಿಯ ಮಾತುಗಳು ಕೇಳಿ ಬರುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಈ ಸಮಸ್ಯೆ ಸೃಷ್ಟಿಯಾಗಿದೆ.

ಬಂದ್ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ವಿದ್ಯುತ್ ಪೂರೈಕೆ ವ್ಯತ್ಯಯ ಎಂಬ ಚೀಟಿ ಅಂಟಿಸಲಾಗಿದೆ. ಇದನ್ನು ಬಿಟ್ಟರೆ ಈ ಘಟಕಗಳನ್ನು ಈವರೆಗೆ ನಿರ್ವಹಣೆ ಮಾಡಿದವರೂ ಇಲ್ಲ.

ತುಮಕೂರು ನಗರದಲ್ಲಿ ಒಟ್ಟು 23 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇದರಲ್ಲಿ 15 ಘಟಕಗಳು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೇರಿವೆ. 6 ಘಟಕಗಳು ಡಾಕ್ಟರ್ ವಾಟರ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.

ಈಗ ಸಮಸ್ಯೆ ಆಗಿರುವುದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೇರಿರುವ ಘಟಕಗಳು. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ತುಮಕೂರು ಮಹಾನಗರ ಪಾಲಿಕೆ

ಒಳಚರಂಡಿ ಮಂಡಳಿ ಸೇರಿರುವ ಈ ಘಟಕಗಳನ್ನು ನಿರ್ವಹಿಸುತ್ತಿರುವುದು ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ಕೆಲ ಕಡೆ ಆಯಾ ವಾರ್ಡಿನ ಪ್ರಭಾವಿಗಳು, ಪಾಲಿಕೆ ಹಾಲಿ, ಮಾಜಿ ಸದಸ್ಯರು ಅನಧಿಕೃತವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ ಬಳಿಕ ಒಳಚರಂಡಿ ಮಂಡಳಿಯು ತನಗೂ ಈ ಘಟಕಕ್ಕೂ ಏನೂ ಸಂಬಂಧವೇ ಇಲ್ಲ ಎಂಬಂತೆ ಕೈ ತೊಳೆದುಕೊಂಡಿದೆ.

ತನ್ನ ಸುಪರ್ದಿಗೆ ಒಳಚರಂಡಿ ಮಂಡಳಿ ಈ ಘಟಕಗಳನ್ನು ವಹಿಸಿಕೊಡದೇ ಇರುವುದರಿಂದ ಮಹಾನಗರ ಪಾಲಿಕೆಯೂ ಈ ಘಟಕಗಳು ತನಗೆ ಸಂಬಂಧವಿಲ್ಲ ಎಂದು ಸುಮ್ಮನಿದ್ದು, ಬಿಟ್ಟಿದೆ. ನೀರು ಪೂರೈಕೆ ಮಾತ್ರ ಮಾಡುತ್ತಿದೆ.

ಆ ನೀರನ್ನು ಪಡೆದು ಈ ಘಟಕಗಳನ್ನು ನಿರ್ವಹಿಸಿ ಹಣ ಪಡೆಯುತ್ತಿರುವವರು ಯಾರು ಎಂಬುದನ್ನು ಈವರೆಗೂ ಒಳಚರಂಡಿ ಮಂಡಳಿಯಾಗಲಿ, ಪಾಲಿಕೆಯಾಗಲಿ ಸಾರ್ವಜನಿಕರಿಗೆ ಬಹಿರಂಗ ಪಡಿಸಿಲ್ಲ.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಗುಣಮಟ್ಟದ ನೀರು ಪೂರೈಕೆ ನಾಗರಿಕರಿಗೆ ಆಗುತ್ತಿದೆಯೇ? ಪ್ರತಿ ಕ್ಯಾನ್‌ಗೆ ಎಷ್ಟು ಹಣ ನಿಗದಿಪಡಿಸಲಾಗಿದೆ ಎಂಬುದು ಸೇರಿದಂತೆ ಯಾವುದರ ಬಗ್ಗೆಯೂ ಗಮನಹರಿಸಿಲ್ಲ ಎಂಬುದು ಸಾರ್ವಜನಿಕರ ವ್ಯಾಪಕ ಟೀಕೆಯಾಗಿದೆ.

ವಿದ್ಯುತ್ ಬಿಲ್ ಬಾಕಿ ₹ 8 ಲಕ್ಷ

12 ಶುದ್ಧ ಕುಡಿಯುವ ನೀರಿನ ಘಟಕಗಳು ಬೆಸ್ಕಾಂಗೆ ₹ 8 ಲಕ್ಷ ವಿದ್ಯುತ್ ಬಿಲ್ ಪಾವತಿಸಬೇಕಾಗಿದ್ದು, ಬಿಲ್ ಪಾವತಿ ಮಾಡದೇ ಇರುವುದರಿಂದ ಈ ಘಟಕಗಳು ಸ್ಥಗಿತಗೊಂಡಿವೆ.

ಘಟಕಗಳನ್ನು ನಿರ್ವಹಣೆ ಮಾಡುತ್ತಿದ್ದವರು ಮಾಯವಾಗಿದ್ದಾರೆ! ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ತಾನು ಯಾರಿಗೆ ವಹಿಸಿತ್ತೊ ಅವರಿಂದ ವಿದ್ಯುತ್ ಬಿಲ್ ಪಾವತಿ ಮಾಡಿಸುವ ಗೋಜಿಗೆ ಒಳಚರಂಡಿ ಮಂಡಳಿ ಅಧಿಕಾರಿಗಳು ಹೋಗಿಲ್ಲ. ‍ಪರಿಣಾಮ ನೀರಿಗಾಗಿ ಸಾರ್ವಜನಿಕರು ಗೋಳಾಡುವಂತಾಗಿದೆ. ಅದೂ ಈ ಬೇಸಿಗೆ ಕಾಲದಲ್ಲಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT