ಶಿರಾ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಲೆಮಾರಿ ಮತ್ತು ಗೊಲ್ಲ ಸಮಾಜಕ್ಕೆ ಅನುಕೂಲವಾಗುವಂತೆ 25 ಸಾವಿರ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದೆ ಎಂದು ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದಲ್ಲಿ ನಿರ್ಮಾಣವಾಗುತ್ತಿರುವ ಮುದ್ದುಕೃಷ್ಣ ಯಾದವ ವಿದ್ಯಾರ್ಥಿ ನಿಲಯದ ಕಾಮಗಾರಿಯನ್ನು ಬುಧವಾರ ರಾತ್ರಿ ವೀಕ್ಷಿಸಿ ಮುದ್ದುಕೃಷ್ಣ ಯಾದವ ವಿದ್ಯಾವರ್ಧಕ ಸಂಘದ ಸಭೆಯಲ್ಲಿ ಮಾತನಾಡಿದರು.
ಅಲೆಮಾರಿ ಹಾಗೂ ಗೊಲ್ಲ ಸಮಾಜದ ಬಡವರಿಗೆ ವಿವಿಧ ತಾಲ್ಲೂಕುಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ವಸತಿ ಯೋಜನೆಯ ಮನೆಗಳನ್ನು ಮಂಜೂರು ಮಾಡಲಾಗಿದೆ. ಉಳಿದ 30 ಸಾವಿರ ಮನೆಗಳನ್ನು ಶೀಘ್ರವೇ ಮಂಜೂರು ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಭರವಸೆ ನೀಡಿದ್ದಾರೆ. ಈಗ ಹಿರಿಯೂರು ತಾಲ್ಲೂಕಿಗೆ 4,456 ಮನೆಗಳು ಹಾಗೂ ಶಿರಾ ತಾಲ್ಲೂಕಿಗೆ 2,682 ಮನೆಗಳು ಮಂಜೂರಾಗಿವೆ ಎಂದರು.
ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಸಣ್ಣ ಪುಟ್ಟ ಹಿಂದುಳಿದ ಸಮಾಜಗಳನ್ನು ಗುರುತಿಸಿ ಹೆಚ್ಚು ಅನುದಾನ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ. ಶಿರಾದಲ್ಲಿ ನಿರ್ಮಾಣವಾಗುತ್ತಿರುವ ಯಾದವ ವಿದ್ಯಾರ್ಥಿ ನಿಲಯಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಯತ್ನ ನಡೆಸಲಾಗುವುದು. ಜತೆಗೆ ವೈಯಕ್ತಿಕವಾಗಿ ಹಣಕಾಸು ಸೌಲಭ್ಯ ನೀಡಿ ಕಾಮಗಾರಿಯನ್ನು ಬೇಗ ಮುಗಿಸಲಾಗುವುದು ಎಂದರು.