ಕೊಡಿಗೇನಹಳ್ಳಿ: ಒಕ್ಕಣೆ ಕಣ ನಿರ್ಮಿಸಿದ್ದ ಸ್ಥಳದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಹುಲ್ಲಿನ ಬಣವೆ ಹಾಕಿ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಗೌರೆಡ್ಡಿಪಾಳ್ಯದ ಜನರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 183ರಲ್ಲಿ 2019ರಲ್ಲಿ ರಾಮಕೃಷ್ಣರೆಡ್ಡಿ ಅವರ ಜಮೀನಿನ ಪಕ್ಕದ ಸರ್ಕಾರಿ ಜಮೀನಿನಲ್ಲಿ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ಸಾರ್ವಜನಿಕ ಒಕ್ಕಣೆ ಕಣ ನಿರ್ಮಿಸಲಾಗಿತ್ತು. ಈಗ ಸಿದ್ದಮ್ಮ ಮತ್ತು ಅವರ ಮಗ ಅಶ್ವತ್ಥರೆಡ್ಡಿ ಎಂಬುವರು ಈ ಜಾಗ ನಮಗೆ ಸೇರಿದ್ದು ಎಂದು ಆ ಸ್ಥಳದಲ್ಲಿ ಬಣವೆ ಹಾಕಿ ನಮಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಜನರು ದೂರಿದರು.
ಒಕ್ಕಣೆ ಕಣ ಸರ್ಕಾರಿ ಖರಾಬ್ ಜಾಗದಲ್ಲಿದೆ. ಇದರಿಂದ ಈ ಸ್ಥಳ ಸಾರ್ವಜನಿಕರಿಗೆ ಸದ್ಬಳಕೆಯಾಗಬೇಕೇ ಹೊರತು ಒಬ್ಬಿಬ್ಬರ ಸ್ವಂತಕ್ಕಲ್ಲ. ಹಾಗಾಗಿ, ನೀವು ಕಣಕ್ಕೆ ದಾರಿಬಿಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಿಡಿಒ ಸತ್ಯನಾರಾಯಣ ಜಮೀನಿನ ಮಾಲೀಕರಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗೋಪಾಲ್, ಸದಸ್ಯ ಕೆ.ಎಂ. ರಾಜೇಶ್, ಗ್ರಾಮಸ್ಥರಾದ ಶಂಕರರೆಡ್ಡಿ, ನಾಗರೆಡ್ಡಿ, ನರೇಶ್, ಓಬರೆಡ್ಡಿ, ನರಸ ರೆಡ್ಡಿ, ಶಿವರಾಮರೆಡ್ಡಿ, ನಾರಾಯಣರೆಡ್ಡಿ, ಲಕ್ಷ್ಮಿಶ್ ರೆಡ್ಡಿ, ಮುಕ್ತಿಯಾರ್, ಮೈಲಾರಿ, ರಾಜಪ್ಪ, ಶಶಿಕುಮಾರ್ ಇದ್ದರು.