ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಕಾರ್ಡ್ ಪಡೆಯಲು ನೂಕು ನುಗ್ಗಲು

ಕೊಡಿಗೇನಹಳ್ಳಿ; ನಿತ್ಯ ಸರತಿ ಸಾಲಿನಲ್ಲಿ ನಿಂತವರ ಗೋಳು ಕೇಳುವವರ್ಯಾರು
Last Updated 13 ಜೂನ್ 2019, 19:31 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ (ಮಧುಗಿರಿ): ನಾಡಕಚೇರಿಯಲ್ಲಿ ಆಧಾರ್ ಕಾರ್ಡ್ ಪಡೆಯಲು ಪ್ರತಿದಿನ ನೂಕು- ನುಗ್ಗಲು. ಸರತಿ ಸಾಲಿನಲ್ಲಿ ನಿಂತು ಮಕ್ಕಳು ಮತ್ತು ತಾಯಂದಿರು ಹೈರಾಣಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಕೊಡಿಗೇನಹಳ್ಳಿ ಸುಮಾರು 50ಕ್ಕಿಂತ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೊಡ್ಡ ಹೋಬಳಿ. ನಾಡಕಚೇರಿಯಲ್ಲಿ ಪಹಣಿ, ಜಾತಿ, ಆದಾಯ, ವಂಶವೃಕ್ಷ ಮತ್ತು ಆಧಾರ್ ಕಾರ್ಡ್ ಇವುಗಳೆಲ್ಲವನ್ನು ಒಬ್ಬ ಕಂಪ್ಯೂಟರ್ ಆಪರೇಟರ್ ನೀಡಬೇಕಾದ ಕಾರಣ ಇಲ್ಲಿನ ಜನರಿಗೆ ತೊಂದರೆಯಾಗುತ್ತಿದೆ.

ಆದ್ದರಿಂದ ಮತ್ತೊಬ್ಬ ಕಂಪ್ಯೂಟರ್ ಆಪರೇಟರ್‌ ನೇಮಿಸಿ. ಇಲ್ಲವೇ, ಆಯಾ ಗ್ರಾಮ ಪಂಚಾಯಿತಿಗಳಲ್ಲೇ ದಾಖಲೆಗಳನ್ನು ನೀಡಲು ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಅನೇಕ ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೂನ್ ತಿಂಗಳಾಗಿರುವುದರಿಂದ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ರೈತರು ವಿವಿಧ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಪಡೆಯಲು ಹೆಚ್ಚಿನ ಜನರು ಸೇರುತ್ತಿದ್ದಾರೆ. ಆದರೆ, ನಾಡಕಚೇರಿಯಲ್ಲಿ ಪ್ರತಿ ಗುರುವಾರ, ಶನಿವಾರ ಹಾಗೂ ಮಂಗಳವಾರ ಮಾತ್ರ ಆಧಾರ್ ಕಾರ್ಡ್ ಮಾಡುವುದರಿಂದ ಸರತಿ ಸಾಲಿನಲ್ಲಿ ನೂರಾರು ಜನರು ನಿಲ್ಲುತ್ತಾರೆ.

‘ನಿಗದಿಯಂತೆ ಮಧ್ಯಾಹ್ನದ ಮೇಲೆ ಆಧಾರ್ ಕಾರ್ಡ್ ತೆಗೆದರೂ ಹೋಬಳಿಯ ಜನರು ಅಂದು ಬೆಳಿಗ್ಗೆ 8ರಿಂದ 9 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ, ಇಲ್ಲಿ ಸರ್ವರ್ ಬ್ಯುಸಿ ಅಥವಾ ಕೆಲ ಕಾರಣಗಳಿಂದ ದಿನಕ್ಕೆ ಕೇವಲ 12ರಿಂದ 15 ಜನರ ಕಾರ್ಡ್ ಮಾಡಲಾಗುತ್ತದೆ. ಮಿಕ್ಕವರು ಇಲ್ಲಿನ ವ್ಯವಸ್ಥೆಯನ್ನು ಶಪಿಸುತ್ತ ವಾಪಸಾಗುತ್ತಾರೆ’ ಎಂದು ಪರ್ತಿಹಳ್ಳಿ ಗ್ರಾಮದ ರಾಜಗೋಪಾಲರೆಡ್ಡಿ ಆರೋಪಿಸಿದರು.

ಗುರುವಾರ ಮಧ್ಯಾಹ್ನ ಆಧಾರ್ ಕಾರ್ಡ್ ಪಡೆಯಲು ನಾಡಕಚೇರಿ ಮುಂದೆ ನೆರೆದಿದ್ದ ಸುಮಾರು 100ಕ್ಕಿಂತ ಹೆಚ್ಚಿನ ಜನರನ್ನು ನಿಯಂತ್ರಿಸಲು ಉಪತಹಶೀಲ್ದಾರ್ ನಾಗರಾಜು ಮುಂದಾದಾಗ ಸಾರ್ವಜನಿಕರು ಅವರನ್ನು, ‘ದಿನ ಎಷ್ಟು ಜನಕ್ಕೆ ಸಾಧ್ಯವಾಗುತ್ತೋ ಅಷ್ಟು ಜನಕ್ಕೆ ಮಾತ್ರ ಟೋಕನ್ ನೀಡಬೇಕು. ಅದು ಬಿಟ್ಟು ಹೋಬಳಿಯ ಎಲ್ಲ ಜನರನ್ನು ಕೂಡಿ ಹಾಕಿಕೊಂಡು ಹಿಂಸೆ ನೀಡುತ್ತಿದ್ದೀರಾ’ ಎಂದು ತರಾಟೆ ತೆಗೆದುಕೊಂಡರು.

ಆಗ ಕೆಲ ಸಾರ್ವಜನಿಕರಿಗೂ ಮತ್ತು ಉಪತಹಶೀಲ್ದಾರ್‌ಗೂ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಸಂಬಂಧಿಸಿದವರು ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದರೆ ನಾಡಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

**

ನನ್ನ ಮಗನಿಗೆ ಆಧಾರ್ ಕಾರ್ಡ್ ಮಾಡಿಸಲು ಕಂಕಳಲ್ಲಿ ಮಗು ಎತ್ತಿಕೊಂಡು 20 ದಿನಗಳಿಂದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದೇನೆ. ಸಂಬಂಧಿಸಿದವರಿಗೆ ಮಾತೃ ಹೃದಯವಿರದೆ ಕಲ್ಲು ಹೃದಯವಿದೆಯೋ ತಿಳಿಯುತ್ತಿಲ್ಲ.
-ಶ್ವೇತಾ, ಕಡಗತ್ತೂರು

*

ಗ್ರಾಮ ಪಂಚಾಯಿತಿಗಳಲ್ಲಿ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಇರುವುದರಿಂದ ಅಮಾಯಕ ಜನರನ್ನು ನಾಡಕಚೇರಿಗೆ ಅಲೆಸುವ ಬದಲು ಆಯಾ ಗ್ರಾಮ ಪಂಚಾಯಿತಿಗಳಲ್ಲೇ ಅಗತ್ಯ ದಾಖಲೆಗಳನ್ನು ವಿತರಿಸಲಿ.
-ಎಸ್.ಶಿವಕುಮಾರ್, ವಿದ್ಯಾರ್ಥಿ, ಮುತ್ತರಾಯನಹಳ್ಳಿ

*

ನಾಳೆಯಿಂದಲೇ ಪ್ರತಿದಿನ 50 ಜನರಿಗೆ ಆಧಾರ್ ಕಾರ್ಡ್ ತೆಗೆಯಲು ಹಾಗೂ ಮುಂಚೆಯೆ ಟೋಕನ್ ವ್ಯವಸ್ಥೆ ಕಲ್ಪಿಸಲು ಉಪತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ
-ಎಲ್.ಎನ್.ನಂದೀಶ್, ಮಧುಗಿರಿ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT