ತುಮಕೂರು: ಹಳ್ಳಿಗಳೆಲ್ಲ ಸುವರ್ಣಮುಖಿಯಾಗಬೇಕು. ಇದರಿಂದ ರೈತರು, ಜನಸಾಮಾನ್ಯರಉದ್ಧಾರ ಸಾಧ್ಯ ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ ತಿಳಿಸಿದರು.
ಸ್ಟೂಡೆಂಟ್ ಬುಕ್ ಕಂಪನಿ ಹಾಗೂ ಸಂಚಲನ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾಹಿತಿ ಸಿದ್ದಗಂಗಯ್ಯ ಹೊಲತಾಳು ಅವರ ‘ಸುವರ್ಣಮುಖಿ’ ಕೃತಿ ಬಿಡುಗಡೆಮಾಡಿ ಮಾತನಾಡಿದರು.
ಹಳ್ಳಿಗಳು ಭೌಗೋಳಿಕವಾಗಿ ಸಣ್ಣವು. ಸಾಂಸ್ಕೃತಿಕವಾಗಿ ಬಹುದೊಡ್ಡವು. ಆದರೆ ಪ್ರಸ್ತುತ ಹಳ್ಳಿಯ ಜನರು ನಗರಗಳತ್ತ ಚಲಿಸುತ್ತಿದ್ದು ಇಲ್ಲಿನ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಹಳ್ಳಿಗಳು ಉಳಿಯಬೇಕು, ಅಭಿವೃದ್ಧಿಯಾಗಬೇಕು. ಜನ ಗ್ರಾಮಗಳತ್ತ ಮತ್ತೆ ಮುಖಮಾಡಬೇಕು ಎಂಬ ಚಳವಳಿಗೆ ಸುವರ್ಣಮುಖಿ ಕೃತಿ ಮಾರ್ಗ ತೋರಿಸುತ್ತದೆ ಎಂದರು.
ನಿವೃತ್ತ ಅಧಿಕಾರಿ ಮಹೇಶ ಜೋಶಿ, ‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಪರಿಷತ್ನಲ್ಲಿ ಹೊಸ ಮನ್ವಂತರ ತಂದು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುತ್ತೇನೆ’ ಎಂದು ಹೇಳಿದರು.
ಸುವರ್ಣಮುಖಿ ಕೃತಿಕಾರ ಸಿದ್ದಗಂಗಯ್ಯ, ‘ರೈತರು ಕೃಷಿ ಬಿಟ್ಟು ಬೇರೆಡೆ ಮುಖ ಮಾಡುತ್ತಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಲಾಭಕ್ಕಾಗಿ ಕಾಯಬೇಕು. ಕೃಷಿ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಈ ಕೃತಿ ಬರೆದಿದ್ದೇನೆ’ ಎಂದು ತಿಳಿಸಿದರು.
ವಿಮರ್ಶಕ ನೀ.ಹ.ರವಿಕುಮಾರ್, ಲೇಖಕ ಎಂ.ಎಚ್.ನಾಗರಾಜು, ಸಾಹಿತಿ ಎಂ.ವಿ.ಶಂಕರಾನಂದ, ಸ್ಟೂಡೆಂಟ್ ಬುಕ್ ಕಂಪನಿಯ ಎಂ.ಸದಾಶಿವ, ರಾಣಿಚಂದ್ರಶೇಖರ್, ಎಂ.ಆರ್.ಗಣೇಶ್ ಕುಮಾರ್ ಇದ್ದರು.