ತುಮಕೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟವು ರಾಜ್ಯದಾದ್ಯಂತ ಶುಕ್ರವಾರ ಕರೆ ನೀಡಿದ್ದ ಪ್ರತಿರೋಧ ದಿನಕ್ಕೆ ತುಮಕೂರಿನಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ವಿದ್ಯಾರ್ಥಿಗಳು ಹಾಗೂ ಎಐಡಿಎಸ್ಒ ಕಾರ್ಯಕರ್ತರು ಭಾಗವಹಿಸಿ ತಮ್ಮ ಮನೆಗಳಲ್ಲಿಯೇ ಹೊಸ ಶಿಕ್ಷಣ ನೀತಿ ಪ್ರತಿಕೃತಿ ದಹನ ಮಾಡಿದರು. ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹೊಸ ಶಿಕ್ಷಣ ನೀತಿಯು ಅತ್ಯಂತ ಪ್ರಗತಿಪರ, ವಿದ್ಯಾರ್ಥಿ ಪರ ಎಂದು ಸರ್ಕಾರ ಸೇರಿದಂತೆ ಹಲವರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಈ ನೀತಿಯು, ಶಿಕ್ಷಣ ಕ್ಷೇತ್ರವು ಈಗಾಗಲೇ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸೂಚಿಸಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಖಾಸಗೀಕರಣವನ್ನು ಇನ್ನಷ್ಟು ಬೆಳೆಸುವ ನೀಲನಕ್ಷೆಯಾಗಿದೆ. ಬಡವರಿಂದ ಶಿಕ್ಷಣವನ್ನು ಬಹುದೂರ ಕೊಂಡೊಯ್ಯುವ ಈ ನೀತಿಯನ್ನು ಎಐಡಿಎಸ್ಒ ಖಂಡಿಸುತ್ತದೆ ಎಂದಿದ್ದಾರೆ.