ತುರುವೇಕೆರೆ: ಹಿರೇಮಗಳೂರಿನ ದೇಶಭಕ್ತ ಅಳಸಿಂಗ ಪೆರುಮಾಳ್ ವೇದಿಕೆ, ಸಂಸ್ಕಾರ ಭಾರತೀ ಹಾಗೂ ಇಂಡಿಯನ್ ಪಬ್ಲಿಕ್ ಶಾಲೆಯಿಂದ ಅ. 1ರಂದು ಅಳಸಿಂಗ ಪ್ರಶಸ್ತಿ ಪ್ರದಾನ ಸಮಾರಂಭವು ಪಟ್ಟಣದ ಶಿವಯೋಗೀಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಸ್ಕಾರ ಭಾರತೀ ತಾಲ್ಲೂಕು ಕಾರ್ಯದರ್ಶಿ ಡಾ.ರುದ್ರಯ್ಯ ಹಿರೇಮಠ್ ತಿಳಿಸಿದರು.
ಪಟ್ಟಣದ ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ನೊಣವಿನಕೆರೆ ವಿರಕ್ತ ಮಠದ ಡಾ.ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಚಿದಂಬರೇಶ್ವರ ಗ್ರಂಥಾಲಯದ ಮುಖ್ಯಸ್ಥ ಟಿ. ರಾಮಚಂದ್ರು ಅವರಿಗೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಸರಿತಾ ದೇವರಮನೆ ತಂಡದಿಂದ ಕವಿ ನುಡಿ, ಕೆ.ಜೆ. ಶ್ರೀನಿವಾಸ್ ಅವರಿಂದ ಶುಭ ನುಡಿ, ಉಪನ್ಯಾಸಕ ತ್ಯಾಗರಾಜ್ ಅವರಿಂದ ಬೆನ್ನುಡಿ ಹಾಗೂ ನಾಗಶ್ರೀ ತ್ಯಾಗರಾಜ್ ಅವರು ಅಳಸಿಂಗರ ಕುರಿತು ಹೊನ್ನುಡಿ ನುಡಿಯಲಿದ್ದಾರೆ ಎಂದರು.
ಸಂಸ್ಕಾರ ಭಾರತೀ ತಾಲ್ಲೂಕು ಅಧ್ಯಕ್ಷೆ ಉಷಾ ಶ್ರೀನಿವಾಸ್ ಅವರು ಸವಿ ನುಡಿಯನಾಡಲಿದ್ದು ಹಿರೇಮಗಳೂರು ಕಣ್ಣನ್ ಅವರು ಬೆನ್ನುಡಿಗಳನ್ನಾಡಲಿದ್ದಾರೆ. ಸಮಾರಂಭದ ಬಳಿಕ ಅವರ ತಂಡದವರಿಂದ ಹರಟೆ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಾಸಕ್ತರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಂಸ್ಕಾರ ಭಾರತೀ ತಾಲ್ಲೂಕು ಘಟಕದ ಅಧ್ಯಕ್ಷೆ ಉಷಾ ಶ್ರೀನಿವಾಸ್, ಶಿಕ್ಷಕ ಕೃಷ್ಣ ಚೈತನ್ಯ, ಇಂಡಿಯನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಪುಷ್ಪಾ ಎಸ್. ಪಾಟೀಲ, ಶಿಕ್ಷಕಿ ಶಶಿಕಲಾ ಹಿರೇಮಠ್, ಟಿ. ರಾಮಚಂದ್ರು ಉಪಸ್ಥಿತರಿದ್ದರು.