ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಮೇರು ಅಲ್ಲಮ: ಸಂಶೋಧಕ ಯೋಗೀಶ್ವರಪ್ಪ ನುಡಿ

ಅಲ್ಲಮಪ್ರಭು ಜಯಂತಿ
Last Updated 20 ಏಪ್ರಿಲ್ 2019, 11:25 IST
ಅಕ್ಷರ ಗಾತ್ರ

ತುಮಕೂರು: 12ನೇ ಶತಮಾನದ ಉಳಿದೆಲ್ಲ ಶರಣರು ಒಂದು ತೂಕವಾದರೆ ಅಲ್ಲಮಪ್ರಭುವೊಬ್ಬನೇ ಇನ್ನೊಂದು ತೂಕ. ಅವನು ಸಿದ್ಧಿಯ ತುತ್ತ ತುದಿಗೇರಿದವನು. ಅವನು ಒಪ್ಪಿದರೆ ಆ ಶರಣನಿಗೆ ಕಿಮ್ಮತ್ತು ಬರುತ್ತಿತ್ತು. ಆತನೊಬ್ಬ ಪ್ರಶ್ನಾತೀತ ಮತ್ತು ಪರೀಕ್ಷಾತೀತ ಅತಿಮಾನವ ಎಂದು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ನುಡಿದರು.

ನಗರದ ಜಯದೇವ ವಿದ್ಯಾರ್ಥಿನಿಲಯದ ಬಸವ ಮಂಟಪದಲ್ಲಿ ಬಸವಕೇಂದ್ರ ಏರ್ಪಡಿಸಿದ್ದ ಅಲ್ಲಮಪ್ರಭು ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಇದುವರೆಗೂ ಲಭ್ಯವಿರುವ ಆತನ ವಚನಗಳ ಸಂಖ್ಯೆ 1,645. ಆ ಎಲ್ಲ ವಚನಗಳು ಕಬ್ಬಿಣದ ಕಡಲೆ. ಅವುಗಳನ್ನು ವೇದಾಂತ ಮತ್ತು ತಂತ್ರಶಾಸ್ತ್ರದ ಪರಿಚಯವಿದ್ದವರು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಇಂತಹ ಬೆರಗುಗೊಳಿಸುವ ಬೆಡಗಿನ ವಚನಗಳನ್ನು ಚರಿತ್ರೆಯಲ್ಲೆ ಮೊದಲಬಾರಿಗೆ ರಚಿಸಿ ಬೆಡಗಿನ ವಚನಗಳ ಪರಂಪರೆಗೆ ನಾಂದಿ ಹಾಡಿದನು ಅಲ್ಲಮಪ್ರಭು. ಹೀಗಾಗಿ ಅವನನ್ನು ಬೆಡಗಿನ ವಚನಗಳ ಪಿತಾಮಹ ಎನ್ನಬಹುದು ಎಂದರು.

ಅಲ್ಲಮ ಕಾಯಕಕ್ಕಿಂತ ಹೆಚ್ಚಾಗಿ ಜಂಗಮ ದಾಸೋಹಕ್ಕೆ ಪ್ರಾಮುಖ್ಯ ನೀಡಿದ್ದ. ಅವನ ವಚನಗಳಲ್ಲಿ ಕಾಯಕ ಪದದ ಬಳಕೆ ಬೆರಳೆಣಿಕೆಯಷ್ಟು ಮಾತ್ರ. ಶೂನ್ಯಪೀಠದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ವ್ಯಕ್ತಿಯಾದ ಅಲ್ಲಮನ ಆಯ್ಕೆಯನ್ನು ಅಂದು ಕೆಲವರು ಜಂಗಮನಲ್ಲದ ಕಾರಣಕ್ಕೆ ವಿರೋಧಿಸಿದ್ದರು. ಆದರೆ ಬಸವಣ್ಣ ಅಲ್ಲಮನ ಪರವಾಗಿ ನಿಂತರು ಎಂದು ನುಡಿದರು.

ಅಲ್ಲಮ ಅತಿಯಾಗಿ ಪ್ರೀತಿಸಿದ್ದ ರಾಮಲತೆಯ ನಾಡೇ ಅವನ ಜೀವನಕ್ಕೆ ತಿರುವು ನೀಡಿದ ಘಟನೆಯಾಗಿದೆ. ಅತಿಮೋಹ ದುಃಖಕ್ಕೆ ಕಾರಣ ಎಂಬುದು ಅಲ್ಲಮನ ಸಿದ್ಧಾಂತ ಎಂಬುದನ್ನು ಆತನ ಜೀವನದ ಘಟನೆಯಿಂದ ತಿಳಿಯಬಹುದು. ಅವನು ಜನಸಾಮಾನ್ಯರೊಂದಿಗೆ ಬೆರೆಯುವ ವ್ಯಕ್ತಿಯಲ್ಲ. ಯಾವಾಗಲೂ ಏಕಾಂಗಿತನ ಬಯಸುತ್ತಿದ್ದ. ಆತ ಶರಣ ಲೋಕದ ಧ್ರುವತಾರೆ ಎಂದು ಬಣ್ಣಿಸಿದರು.

ಪುಷ್ಪಾವತಿ ಪ್ರಾರ್ಥಿಸಿದರು. ಬಸವಕೇಂದ್ರದ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು, ಆಶಾ ನಿರಂಜನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT