ತುಮಕೂರು: ಸಮುದಾಯ ರಂಗ ತಂಡದ ಆಶ್ರಯದಲ್ಲಿ ನಡೆಯುತ್ತಿರುವ ಕಾಯಕ ಜೀವಿಗಳಿಗೆ ಶರಣು ಜಾಥಾ ಹಾಗೂ ‘ಒಳಿತು ಮಾಡು ಮನುಸಾ’ ಬೀದಿ ನಾಟಕ ಪ್ರದರ್ಶನ ಶುಕ್ರವಾರ ಸಂಜೆ ಇಲ್ಲಿನ ರವೀಂದ್ರ ಕಲಾನಿಕೇತನ ಕಲಾ ಶಾಲೆ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಂಗಕರ್ಮಿ ಪ್ರಸನ್ನ, ಕಾರ್ಮಿಕರ, ನೇಕಾರರ, ಬಡವರ, ಕೃಷಿಕರ ಸಂಕಷ್ಟಗಳನ್ನು ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ತಿಳಿಸಿಕೊಡುವುದೇ ಈ ಜಾಥಾ ಉದ್ದೇಶ. ಕೊರೊನಾ ಕುರಿತ ಬೀದಿನಾಟಕದಲ್ಲಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮಾಜಕ್ಕೆ ತಿಳಿಸಲಾಗುವುದು ಎಂದರು.
'ಬಡವರು, ಶ್ರಮಿಕರು, ಕಾರ್ಮಿಕರು, ನೇಕಾರರು, ಕೃಷಿಕರು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಇಂದು ನಮಗೆ ಗಾಂಧಿ ಬರೀ ಪರ್ಯಾಯ ಮಾತ್ರವಲ್ಲ ಅನಿವಾರ್ಯವೂ ಆಗಿದ್ದಾರೆ. ನಾವು ಇಂದು ಪವಿತ್ರ ಆರ್ಥಿಕತೆಯನ್ನು ಬೆಂಬಲಿಸಬೇಕಿದೆ' ಎಂದು ಹೇಳಿದರು.
'ದೇಶದಲ್ಲಿ ಗ್ರಾಮೋದ್ಯೋಗಿಗಳು, ಸಣ್ಣಕಾರ್ಮಿಕರು, ಕೃಷಿ ಉದ್ಯೋಗಿಗಳು ಸೇರಿದರೆ ಇವರೇ ಶೇ 70ರಷ್ಟು ಜನಸಂಖ್ಯೆ ಆಗುತ್ತದೆ. ಇವರೆಲ್ಲ ಸೇರಿ ಕಟ್ಟುವ ದೇಶ ಸುಸಜ್ಜಿತವಾಗಿ ಇರುತ್ತದೆ. ಇವರು ಕಟ್ಟುವ ಆರ್ಥಿಕತೆಯಲ್ಲಿ ಅಂಬಾನಿಗೆ, ಅದಾನಿಗೆ ಲಾಭ ಬರುವುದಿಲ್ಲ. ಆದರೆ ಅದಕ್ಕಿಂತ ಮಿಗಿಲಾಗಿ ಬಹುದೊಡ್ಡ ಸಾಮಾಜಿಕ ಲಾಭ ಸಿಗುತ್ತದೆ. ನಾವು ಬರೀ ಆರ್ಥಿಕ ಲಾಭದ ಹಿಂದೆ ಓಡುತ್ತ ಸಾಮಾಜಿಕ ಲಾಭ ಮರೆತಿದ್ದೇವೆ' ಎಂದು ಹೇಳಿದರು.
ಪರಿಸರವಾದಿ ಸಿ.ಯತಿರಾಜು, ಶಿಕ್ಷಣ ತಜ್ಞ ವುಡೆ ಪಿ.ಕೃಷ್ಣ, ಗಾಂಧಿವಾದಿ ತುಂಡೋಟಿ ನರಸಿಂಹಯ್ಯ, ಕವಿತಾ ಕೃಷ್ಣನ್, ಬಸವಯ್ಯ ಮಾತನಾಡಿದರು. ಶಶಿಧರ ಭಾರಿಘಾಟ್, ‘ಒಳಿತು ಮಾಡು ಮನುಸಾ’ ನಾಟಕ ನಿರ್ದೇಶಕ ಮಾಲತೇಶ್, ಗ್ರಾಮ ಸೇವಾ ಸಂಘದ ಅಭಿಲಾಷ್, ಉಗಮ ಶ್ರೀನಿವಾಸ್, ಪಂಡಿತ್ ಜವಾಹರ್ ಇದ್ದರು.