ತುಮಕೂರು: ಸದಾಶಿವನಗರದ ಅನ್ಸರ್ ಅಹಮದ್ ಖಾನ್ ಎಂಬುವರಿಗೆ ತುಮಕೂರಿನಲ್ಲಿ ಹರಾಜಾಗುವ ನಿವೇಶನಗಳನ್ನುಮುಂಚೆಯೇ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಆರೋಪದ ಮೇಲೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿ ನಾಪತ್ತೆಯಾಗಿದ್ದಾನೆ.
ಬಿ.ಮಧುಕುಮಾರ್, ಗುರುಪ್ರಸಾದ್, ಶ್ರೀನಿವಾಸ, ಅಯಾಜ್ ಅಹಮದ್, ಲೋಕೇಶ್, ಮಂಜುನಾಥ ಬಂಧಿತರು. ಶೈಲಶ್ರೀ, ಶ್ರೀನಿವಾಸ ನಾಪತ್ತೆಯಾಗಿದ್ದಾರೆ. ಬಂಧಿತರಿಂದ ₹ 6 ಲಕ್ಷ ಬೆಲೆ ಕಾರು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಅನ್ಸರ್ ಅಹಮದ್ ಖಾನ್ರಿಂದ ಇ.ಎಂ.ಡಿ ಹಣ ಕಟ್ಟಿಸಿಕೊಂಡ ಆರೋಪಿಗಳು ನಗದು ಹಾಗೂ ಟೂಡಾ ಕಮಿಷನರ್ ಸೇರಿದಂತೆ 31 ವಿವಿಧ ಹೆಸರುಗಳಲ್ಲಿ ಡಿ.ಡಿ.ಗಳನ್ನು ಪಡೆದಿದ್ದಾರೆ. ₹ 89 ಲಕ್ಷ ಪಡೆದು ಸೈಟುಗಳನ್ನು ಕೊಡಿಸದೆ ಬೆಂಗಳೂರು ಕಾರ್ಪೊರೇಷನ್ ಕಚೇರಿ ಬಳಿ ಡಿ.ಡಿ.ಗಳಿಗೆ ಕಮೀಷನ್ ಪಡೆದು ಡಿಸ್ಕೌಂಟ್ ಮಾಡುವ ಲೋಕೇಶ್, ಆರ್.ಮಂಜುನಾಥ್ ಮೂಲಕ ನಗದು ಮಾಡಿಸಿಕೊಂಡಿದ್ದಾರೆ.
ಎಎಸ್ಪಿ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಎಚ್.ಜೆ.ತಿಪ್ಪೇಸ್ವಾಮಿ, ಅಧಿಕಾರಿಗಳಾದ ಎಂ.ವಿ.ಶೇಷಾದ್ರಿ, ಎಸ್.ಮುನಿರಾಜು, ಎಚ್.ಎಸ್.ನವೀನ, ಸಿಬ್ಬಂದಿ ಸೈಮನ್ ವಿಕ್ಟರ್, ಮುನಾವರ್ಪಾಷ, ಪಿ.ಶಾಂತರಾಜು, ಹನುಮರಂಗಯ್ಯ, ನರಸಿಂಹಮೂರ್ತಿ, ರಂಗಸ್ವಾಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.