ತುಮಕೂರು: ರಂಗಕಲೆ, ಸಂಗೀತ ಮತ್ತು ಕಲಾವಿದರು ಮನಸ್ಸು ಕಟ್ಟುವ ಕೆಲಸದಲ್ಲಿ ನಿರತರಾಗಿರುವುದು ಪ್ರಸ್ತುತ ಸಮಾಜಕ್ಕೆ ಅತ್ಯಂತ ಅವಶ್ಯಕ ಎಂದು ಸಾಹಿತಿ ಎನ್.ನಾಗಪ್ಪ ಹೇಳಿದರು.
ರಂಗಭೂಮಿ ಕಲಾವಿದ ಚಿಕ್ಕಪ್ಪಯ್ಯ ಕೃತಿ ಕುರಿತ ಪರಿಚಯ ಮತ್ತು ಚರ್ಚೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ರಂಗಕಲೆ ಸದಾ ಮನಸ್ಸು ಕಟ್ಟುವ ಕೆಲಸ ಮಾಡುತ್ತದೆ. ಆತ್ಮೀಯ ಹೃದಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತದೆ’ ಎಂದರು.
ದೈನಂದಿನ ಬದುಕಿನಲ್ಲಿ ಕೆಲವರು ಬಣ್ಣ ಹಾಕದೆ ನಾಟಕ ಆಡುತ್ತಾರೆ. ಅವರೇ ಹೆಚ್ಚು ಸಿಗುತ್ತಾರೆ. ಆದರೆ ಬಣ್ಣ ಹಾಕಿಕೊಂಡು ಅದ್ಭುತವಾಗಿ ಕಲಾ ಪ್ರದರ್ಶನ ನೀಡುವ ಕಲೆಗಾರರನ್ನು ಎಷ್ಟು ಗೌರವಿಸಿದರೂ ಸಾಲದು ಎಂದು ಹೇಳಿದರು.
ಶಿರಾ ಕಾಲೇಜು ಪ್ರಾಂಶುಪಾಲ ಚಂದ್ರಯ್ಯ ಬೆಳವಾಡಿ, ‘ರಂಗಕಲೆ ಜೀವಂತವಾಗಿದೆ ಎಂಬುದಕ್ಕೆ ನಾಟಕಗಳನ್ನು ನೋಡಿ ಪ್ರೋತ್ಸಾಹಿಸುತ್ತಿರುವ ಜನರೇ ಜೀವಂತ ಸಾಕ್ಷಿ’ ಎಂದು ತಿಳಿಸಿದರು.
ರಂಗಕಲಾವಿದ ಚಿಕ್ಕಪ್ಪಯ್ಯ, ‘ಮುಂದಿನ ದಿನಗಳಲ್ಲಿ ಜಿಲ್ಲೆಯ ರಂಗಭೂಮಿ ಕಲಾವಿದರನ್ನು ಒಳಗೊಂಡ ಕೃತಿ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ’ ಎಂದರು.
ತುಮಕೂರು ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಶಿವಣ್ಣ ಎಸ್.ಬೆಳವಾಡಿ, ವಕೀಲ ಸಾ.ಚಿ.ರಾಜಕುಮಾರ, ಪ್ರಾಂಶುಪಾಲ ಪ್ರೊ.ಕೆ.ರಾಮಚಂದ್ರಪ್ಪ, ಪ್ರವಚನಕಾರ ಟಿ.ಮುರಳೀಕೃಷ್ಣಪ್ಪ, ಜಕ್ಕೇನಹಳ್ಳಿ ರಾಜಣ್ಣ, ಲಕ್ಷ್ಮಿಕಾಂತ್ ಮಾತನಾಡಿದರು. ಸಿದ್ದಣ್ಣ ಯಜಮಾನ್ ನಿರೂಪಿಸಿ, ಕೃಷ್ಣಪ್ಪ ವಂದಿಸಿದರು.