ತುಮಕೂರು: ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಸಂಘದವರು ಸೋಮವಾರ ಸಾಮೂಹಿಕ ರಜೆ ಹಾಕಿ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರ್ವವ್ಯದಲ್ಲಿದ್ದ ಚಿಕಲಪರ್ವಿ ಗ್ರಾಮಲೆಕ್ಕಿಗ ಸಾಹೇಬ್ ಪಾಟೀಲ್ ಎಂಬುವರು ಮರಳು ತುಂಬಿದ್ದ ಲಾರಿ, ರಾಯಲ್ಟಿ ನೀಡಿದೆಯೇ ಎಂದು ಚೆಕ್ ಮಾಡಲು ಮರಳಿನ ಲಾರಿಯನ್ನು ಅಡ್ಡಗಟ್ಟಿದಾಗ, ಲಾರಿಯ ಚಾಲಕ ಅವರ ಮೇಲೆ ವಾಹನ ಹತ್ತಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ಆರೋಪಿಸಿದರು.
ಮೃತರ ಕುಟುಂಬಕ್ಕೆ ಹೆಚ್ಚಿನ ಅರ್ಥಿಕ ನೆರವು ನೀಡುವುದರ ಜೊತೆಗೆ, ಇಂತಹ ಕೆಲಸಗಳಿಗೆ ನಿಯೋಜಿತರಾಗುವ ಕಂದಾಯ ಇಲಾಖೆಯ ನೌಕರರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಿ, ಇದರ ಹಿಂದಿರುವ ಪ್ರಭಾವಿ ವ್ಯಕ್ತಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಕುಟುಂಬ ಬೀದಿ ಪಾಲಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ ಮನವಿಯನ್ನು ಮುಖ್ಯಮಂತ್ರಿಯವರಿಗೆ ಕಳುಹಿಸಲು ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಅವರಿಗೆ ಕಂದಾಯ ಇಲಾಖೆಯ ನೌಕರರು ಸಲ್ಲಿಸಿದರು.
ಕಂದಾಯ ಇಲಾಖೆಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ.ಮಹೇಶ್, ಮಂಜುನಾಥ ಸೇರಿದಂತೆ ಎಲ್ಲಾ ವೃತ್ತಗಳ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಸಹಾಯಕರು ಇದ್ದರು.