ತುಮಕೂರು: ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡವು ನಗರದ ಮಂಡಿಪೇಟೆ, ಅಂತರಸನಹಳ್ಳಿ ಸೇರಿದಂತೆ ವಿವಿಧ ಕಡೆ ವಾರದಲ್ಲಿ ಮೂರ್ನಾಲ್ಕು ಬಾರಿ ದಾಳಿ ನಡೆಸಿದರೂ ಟನ್ ಗಟ್ಟಲೆ ನಿಷೇಧಿತ ಪ್ಲಾಸ್ಟಿಕ್ ಮತ್ತೆ ಮಾರುಕಟ್ಟೆ ಆವರಿಸುತ್ತಲೇ ಇದೆ.
ಎರಡು ದಿನಗಳ ಹಿಂದೆಯಷ್ಟೇ ದಾಳಿ ನಡೆಸಿದ್ದ ಅಧಿಕಾರಿಗಳ ತಂಡವು ಶುಕ್ರವಾರ ಮತ್ತೆ ಮಂಡಿಪೇಟೆಯಲ್ಲಿ ಅಮ್ಜದ್ ಪಾಷಾ ಎಂಬುವರ ಗೋದಾಮಿನ ಮೇಲೆ ದಾಳಿ ನಡೆಸಿ 1200 ಕೆಜಿ ನಿಷೇಧಿತ ಪ್ಲಾಸ್ಟಿಕ್ನ್ನು ವಶಪಡಿಸಿಕೊಂಡಿದೆ. ನಿಷೇಧಿತ ಪ್ಲಾಸ್ಟಿಕ್ ದಾಸ್ತಾನು ಮಾಡಿದ ಗೋದಾಮು ಮಾಲೀಕರಿಗೆ ₹ 50 ಸಾವಿರ ದಂಡವನ್ನು ಪಾಲಿಕೆ ಆಯುಕ್ತರಾದ ಟಿ.ಭೂಬಾಲನ್ ವಿಧಿಸಿದ್ದಾರೆ.
ಗುರುವಾರ ಸಂಜೆಯೇ ಗೋದಾಮಿನ ಪರಿಶೀಲನೆಗೆ ಪಾಲಿಕೆ ಅಧಿಕಾರಿಗಳ ತಂಡುವ ತೆರಳಿದಾಗ ಗೋದಾಮಿನ ಮಾಲೀಕರು ಇದಕ್ಕೆ ಅವಕಾಶ ಕೊಡದೇ ಆಕ್ಷೇಪ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಪರಿಶೀಲನೆಗೆ ಅವಕಾಶ ಕೊಡದೇ ಇದ್ದಾಗ ಪಾಲಿಕೆ ಅಧಿಕಾರಿಗಳು ಗೋದಾಮಿಗೆ ಬೀಗ ಮುದ್ರೆ ಹಾಕಿದ್ದರು.
ಶುಕ್ರವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಗೋದಾಮು ತೆರೆದು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಲೋಟ ಸೇರಿದಂತೆ ನಿಷೇಧಿತ ವಿವಿಧ ಮಾದರಿಯ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್ಕುಮಾರ್, ನೈರ್ಮಲ್ಯ ವಿಭಾಗದ ಅಧಿಕಾರಿಗಳಾದ ಕೆ.ಎಸ್. ಮೃತ್ಯುಂಜಯ, ಮೋಹನ್, ಕೃಷ್ಣಮೂರ್ತಿ, ಸಿಬ್ಬಂದಿ ಚಿಕ್ಕಸ್ವಾಮಿ, ರುದ್ರೇಶ್ ದಾಳಿ ನಡೆಸಿದ ತಂಡದಲ್ಲಿದ್ದರು.
ಈಚೆಗಿನ ದಾಳಿನಲ್ಲಿ ಅಂದಾಜು 9 ಟನ್ಗಿಂತಲೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಜನಜಾಗೃತಿಯಾಗುತ್ತಿದ್ದರೂ ಮಾರಾಟ ಜಾಲ ಮಾತ್ರ ತನ್ನದೇ ಆದ ಜಾಲದ ಮೂಲಕ ಮಾರುಕಟ್ಟೆಗೆ ನಿಷೇಧಿತ ಪ್ಲಾಸ್ಟಿಕ್ ಹರಿಬಿಡುತ್ತಿದೆ. ಅಂಗಡಿ, ಹೊಟೇಲ್ಗಳಲ್ಲಿ ಗ್ರಾಹಕರಿಗೆ ನಿಷೇಧಿತ ಪ್ಲಾಸ್ಟಿಕ್ ಕೊಡುವುದು ಕಡಿಮೆಯಾಗುತ್ತಿದೆ. ಇಂತಹ ಕಡೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಾಳಿ ನಡೆಸಿದ ತಂಡದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
'₹ 5 ಸಾವಿರದಿಂದ ₹ 20,30 ಸಾವಿರದವರೆಗೂ ದಂಡ ಹಾಕಿದರೂ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ, ಸತತ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಹೇಳಿದರು.