ತಿಪಟೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಮಿಣ ಪ್ರದೇಶದ ಜನರು ನಗರಗಳಿಗೆ ಬರಲು ಸಾಧ್ಯವಿಲ್ಲದ ಕಾರಣ ಬ್ಯಾಂಕ್ನ ಅಧಿಕಾರಿಗಳೇ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಬ್ಯಾಂಕ್ ಸೌಲಭ್ಯ ಮತ್ತು ಸೇವೆ ನೀಡಲು ಮುಂದಾಗಿದ್ದಾರೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಳುವನೆರಲು ಗ್ರಾಮದಲ್ಲಿ ತುಮಕೂರು ಜಿಲ್ಲಾ ಲೀಡ್ ಬ್ಯಾಂಕ್ ಅಡಿಯಲ್ಲಿ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಯನ್ನು ಮನೆಬಾಗಿಲಿಗೆ ಒದಗಿಸಲಾಗುತ್ತಿದೆ.
ಜನಧನ್ ಹಾಗೂ ಪಿ.ಎಂ.ಕಿಸಾನ್ ಯೋಜನೆಯಡಿ ಖಾತೆದಾರರಿಗೆ ಜಮಾ ಆಗಿರುವ ಹಣವನ್ನು ಪಡೆಯಲು ಸಾವಿರಾರು ಜನ ನಗರದ ಬ್ಯಾಂಕ್ಗಳಿಗೆ ಬರಲು ಆರಂಭಿಸಿದ್ದರು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಹಣ ಪಡೆಯಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಗ್ರಾಹಕರ ಸಂಖ್ಯೆಯನ್ನು ಕಂಡು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಜ್ಯೋತಿಗಣೇಶ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಿಣ ಭಾಗಕ್ಕೂ ಸೇವೆ ವಿಸ್ತರಿಸಲು ಖುದ್ದು ಸೇವೆಗೆ ಮುಂದಾಗಿದ್ದಾರೆ.
ಈಗಾಗಲೇ ತಿಪಟೂರು ತಾಲ್ಲೂಕಿನಲ್ಲಿ ಈಚನೂರು, ಮತ್ತಿಘಟ್ಟ, ಸೂಗೂರು, ರುದ್ರಾಪುರ ಗ್ರಾಮಗಳಿಗೆ ತೆರಳಿ ಗ್ರಾಹಕರ ಬಳಿಯಲ್ಲಿರುವ ಎಟಿಎಂ ಕಾರ್ಡ್, ಪಾಸ್ ಪುಸ್ತಕ ಪಡೆದು ಅವರ ಖಾತೆಯಲ್ಲಿನ ಹಣವನ್ನು ನೀಡುತ್ತಿದ್ದಾರೆ.
ಇದರಿಂದ ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತಿದ್ದು, ಬ್ಯಾಂಕಿನ ಸಿಬ್ಬಂದಿ ಈ ಕಾರ್ಯಕ್ಕೆ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.