ತುಮಕೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ಗೆ ಬರಬೇಕಾಯಿತು. ಡಾ.ಜಿ.ಪರಮೇಶ್ವರ ಉಪಮುಖ್ಯಮಂತ್ರಿ ಆಗಲು ಸಮ್ಮಿಶ್ರ ಸರ್ಕಾರ ರಚನೆಯಾಗಬೇಕಾಯಿತು. ಇದು ಎಂಥ ವಿಪರ್ಯಾಸ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು.
ಅಗಳಕೋಟೆಯ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ ಭಾನುವಾರ ಹಮ್ಮಿಕೊಂಡಿದ್ದ ಶಾಸಕ ಡಾ.ಜಿ.ಪರಮೇಶ್ವರ ಅವರ ಸಾಧನೆಯ ‘ಸವ್ಯಸಾಚಿ’ ಗೌರವ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇದು ಕೇವಲ ಪರಮೇಶ್ವರ ಅವರೊಬ್ಬರ ಪ್ರಶ್ನೆಯಷ್ಟೇ ಅಲ್ಲ. ಈ ನಾಡು, ದೇಶದ ಪರಿಶಿಷ್ಟ ಜಾತಿಯ ರಾಜಕಾರಣದ ಪ್ರಶ್ನೆ. ರಾಜಕಾರಣದಲ್ಲಿ ನಾಯಕ ಮತ್ತು ಖಳನಾಯಕನನ್ನು ನಿರ್ಮಾಣ ಮಾಡುವ ಹುಸಿ ಬೌದ್ಧಿಕ ಕಾರ್ಖಾನೆಗಳು ಇಂದು ಜಾಸ್ತಿಯಾಗುತ್ತಿವೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಧ್ವಂಸ ಮಾಡುವ ಕೆಲಸವಾಗುತ್ತಿದೆ. ಧರ್ಮದ ಅಪವ್ಯಾಖ್ಯಾನಗಳಾಗುತ್ತಿವೆ. ಇಂತಹ ಸಮಯದಲ್ಲಿ ಪರಮೇಶ್ವರ್ ಅವರಂತಹ ಸಜ್ಜನ, ಸಮಚಿತ್ತದ ರಾಜಕಾರಣಿಗಳ ಅವಶ್ಯತೆಯಿದೆ’ ಎಂದರು.
‘ಪರಮೇಶ್ವರ ತುಂಬಾ ಮೃಧು ಅಂತಾರೆ. ನಾನು ಒಂದು ಥರಾ ನೀರು ಇದ್ದ ಹಾಗೆ. ನೀರು ಸಮುದ್ರದ ಬಂಡೆ ಒಡೆಯುತ್ತದೆ. ಹಾಗೆ ನಾನು ಎಷ್ಟೇ ಮೃಧುವಾಗಿದ್ದರೂ ನನ್ನ ಚಿಂತನೆಗಳು ತುಂಬಾ ಕಠಿಣವಾಗಿರುತ್ತವೆ’ ಎಂದುಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಶಾಸಕ ಡಾ.ಜಿ.ಪರಮೇಶ್ವರ ಸ್ವವಿಮರ್ಶೆ ಮಾಡಿಕೊಂಡರು.
‘ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಇದುವರೆಗೆ 35 ಸಾವಿರ ಎಂಜಿನಿಯರ್, ಆರು ಸಾವಿರ ವೈದ್ಯರು, ಹಲವು ಶಿಕ್ಷಕರು ಹೊರ ಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಮತ್ತಷ್ಟು ಉತ್ತಮ ಕೆಲಸ ನಡೆಯಲಿವೆ. ತಂದೆ, ತಾಯಿ ಸಂಸ್ಕಾರ ಕಲಿಸಿದ್ದಾರೆ. ಅವರ ಹಾದಿಯಲ್ಲಿ ಸಾಗುತ್ತಿದ್ದೇನೆ’ ಎಂದರು.