ತುಮಕೂರು: ‘ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಎಲ್ಲರೂ ಮಾಡಿಸಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಮುನ್ಸೂಚನೆ ಸಿಕ್ಕಾಗಲೇ ಎಚ್ಚೆತ್ತು ಚಿಕಿತ್ಸೆ ಪಡೆದುಕೊಂಡರೆ ಶೇ 90ರಷ್ಟು ಅಪಾಯಗಳನ್ನು ತಪ್ಪಿಸಬಹುದು’ ಎಂದು ಸಿದ್ಧಗಂಗಾ ಆಸ್ಪತ್ರೆಯ ವೈದ್ಯ ಡಾ.ಭೂಷಣ್ ಹೇಳಿದರು.
ತಾಲ್ಲೂಕಿನ ಗೂಳೂರು ಹೋಬಳಿ ಹೊಳಕಲ್ಲು ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ಸಿದ್ಧಗಂಗಾ ಆಸ್ಪತ್ರೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
’ಸಿದ್ಧಗಂಗಾ ಆಸ್ಪತ್ರೆಯೂ ಜಾಗೃತಿ ಮೂಡಿಸುತ್ತಿದೆ. ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ರಮ ಮಾಡುತ್ತಿದ್ದು, ಸಾರ್ವಜನಿಕರು ಪ್ರಯೋಜನ ಪಡೆಯಬೇಕು’ ಎಂದರು.
ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ.ವಿಜಯಕುಮಾರ್, ಡಾ.ದೀಪಕ್, ಡಾ.ಮುನಿರಾಜು, ಡಾ.ಪ್ರದ್ಯುಮ್ನ, ಡಾ.ವಿದ್ಯಾ ಸೇರಿದಂತೆ ಸಿದ್ಧಗಂಗಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ಹನುಮೇಗೌಡ, ಉಪಾಧ್ಯಕ್ಷ ಶಶಿಕಿರಣ್, ಸದಸ್ಯರಾದ ನಟರಾಜು, ಸಿದ್ಧಗಂಗಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಕಾಂತರಾಜು ಇದ್ದರು.