ಪಾವಗಡ: ಜಮೀನಿಗೆ ಹೋಗುತ್ತಿದ್ದ ರೈತರ ಮೇಲೆ ತಾಲ್ಲೂಕಿನ ಸಾಸಲಕುಂಟೆ ಗುಡ್ಡದ ಬಳಿ ಶುಕ್ರವಾರ ಬೆಳಗ್ಗೆ ಕರಡಿ ದಾಳಿ ಮಾಡಿದ್ದು,ರೈತನೋರ್ವ ಸ್ಥಳದಲ್ಲೇಮೃತಪಟ್ಟಿದ್ದಾರೆ.
ಸಾಸಲಕುಂಟೆ ಗ್ರಾಮದ ವೀರಾಂಜನೇಯ(45) ಕರಡಿ ದಾಳಿಗೆ ಬಲಿಯಾದ ರೈತ. ಗ್ರಾಮದ ಬಳಿಯ ಜಮೀನಿಗೆ ಗುಡ್ಡದ ಬಳಿಯಿಂದ ಹೋಗುವಾಗ ಕರಡಿ ಏಕಾಏಕಿದಾಳಿ ಮಾಡಿದೆ.
ಇದೇ ಗ್ರಾಮದ ಶಿವಪ್ಪರೆಡ್ಡಿ, ಗೋಪಾಲರೆಡ್ಡಿ, ಮೋಹನ್, ನರಸಿಂಹರೆಡ್ಡಿ, ಎರ್ರಪ್ಪ, ಅಜ್ಜಪ್ಪ ಎಂಬುವರ ಕೈ, ಕಾಲಿಗೆ ಕಚ್ಚಿದೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರ ದೇಹ ಸ್ಥಳಾಂತರಿಸಲು ಬಿಡದ ಕರಡಿ: ಸುಮಾರು 3 ಗಂಟೆಕಳೆದರೂ ಕರಡಿ ಗುಡ್ಡದಲ್ಲಿಯೇ ಬೀಡು ಬಿಟ್ಟಿದೆ. ಮೃತರ ದೇಹ ಸ್ಥಳಾಂತರಿಸಲು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಅವಕಾಶ ಕೊಡುತ್ತಿಲ್ಲ. ನೂರಾರು ಮಂದಿ ಸಾರ್ವಜನಿಕರು ಸ್ಥಳದಲ್ಲಿ ನೆರೆದಿದ್ದಾರೆ. ಮೃತರ ಬಳಿ ಹೋದರೆ ಕರಡಿ ಗುಡ್ಡದಿಂದ ಶವದತ್ತ ಓಡಿ ಬರುತ್ತಿದೆ.