ಕೊರಟಗೆರೆ: ಪ್ರಾಣಿಗಳ ಬೇಟೆಯಾಡಲು ಅಳವಡಿಸಿದ್ದ ಉರುಳಿಗೆ ಬಿದ್ದು ನರಳಾಡಿದ್ದ ಗಂಡು ಕರಡಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ವೆಂಕಟಾಪುರ ಗ್ರಾಮದ ಗುಟ್ಟೆಯ ಬಳಿ ಘಟನೆ ನಡೆದಿದೆ.
ಇತ್ತೀಚೆಗೆ ಕರಡಿ ಉರುಳಿಗೆ ಸಿಲುಕಿ ನರಳಾಡಿತ್ತು. ಕೊನೆಗೆ ಉರುಳಿನಿಂದ ಬಿಡಿಸಿಕೊಂಡ ಕರಡಿಯ ಕಾಲಿಗೆ ತೀವ್ರ ತರಹದ ಗಾಯಗಳಾಗಿತ್ತು. ಗಾಯವಾಗಿದ್ದರಿಂದ ಆಹಾರಕ್ಕಾಗಿ ಪರದಾಡಿ ರಸ್ತೆಯ ಬದಿಯಲ್ಲಿ ಬಿದ್ದಿದೆ.
ಇದನ್ನು ಗಮನಿಸಿದ ಎ.ವೆಂಕಟಾಪುರ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದು ಗಾಯಗೊಂಡ ಕರಡಿಯನ್ನು ಚಿಕಿತ್ಸೆಗಾಗಿ ಕೊರಟಗೆರೆಯ ಪಶು ಇಲಾಖೆಗೆ ದಾಖಲು ಮಾಡಿದ್ದಾರೆ. ಆದರೆ, ಪಶು ಇಲಾಖೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕರಡಿ ಮೃತಪಟ್ಟಿದೆ.
ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶಚಂದ್ರ, ಅರಣ್ಯ ಸಿಬ್ಬಂದಿ ನಾಗರಾಜು, ಹನುಮಂತಯ್ಯ, ನಂದೀಶ್, ನೇಹಜುಲ್ ತಸ್ಮೀಯಾ, ನರಸಿಂಹಯ್ಯ, ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.