ನನ್ ಹೆಸ್ರು, ಕಥೆ ಕಟ್ಕೊಂಡು ನೀವೇನು ಮಾಡ್ತೀರಾ ಸ್ವಾಮಿ. ಅಂಗೂ ಬೇಕಂದ್ರೆ ಬರ್ಕಳಿ. ಹೆಸ್ರು ಚಿಕ್ಕಣ್ಣ. ಮನೆಗಳಿಂದ ಊಟದ ಕ್ಯಾರಿಯರ್ಗಳನ್ನು ತಕೊಂಡು ಅಂಗಡಿಗಳ ಮಾಲೀಕರಿಗೆ ತಲುಪಿಸೊ ಕೆಲ್ಸಾ ಮಾಡ್ತೀನಿ.
ನನ್ನೂರು ಮಂಡ್ಯದ ಮುದ್ದೇನಘಟ್ಟ. 1960ರಲ್ಲಿ ಬೆಂಗಳೂರಿಗೆ ಬಂದೆ. ಹೆಸರಘಟ್ಟ ಫಾರ್ಮ್ನಲ್ಲಿ ಒಂದು ವರ್ಷ ಕೆಲ್ಸ ಮಾಡ್ದೆ. ಕಂಟೋನ್ಮೆಂಟ್ ಹತ್ರ ಮಂತ್ರಿ ಬಂಗ್ಲೆ ಅಂತ ಇತ್ತು. ಅಲ್ಲೊಂದು ಆರ್ ತಿಂಗ್ಳು ಚಾಕ್ರಿ ಮಾಡ್ದೆ. ಈ ಮಲ್ಲೇಶ್ವರದ 9ನೇ ಕ್ರಾಸ್ನಲ್ಲಿ ಒಂದು ದೊಡ್ ಮನೆಯಿತ್ತು. ಅವರತ್ರ ಹತ್ತು ಹಸು, ಆರೆಮ್ಮೆ ಇದ್ವು. ಅಲ್ಲಿ ಜೀತಕ್ಕೆ ಸೇರ್ದೆ.
ದಿನಾ ಬೆಳಿಗ್ಗೆ ಎದ್ದು ಸೆಗಣಿ ಬಾಚೋದು, ರಾಸುಗಳ ಮೈತೊಳೆಯೋದು, ಮೇವು ಹಾಕೋದು, ಮನೆತನಕ ಬರೋ ಗಿರಾಕಿಗಳಿಗೆ ಹಾಲು ಹಾಕೋದು, ಕೆಲವು ಮನೆಗೆ ಹೋಗಿ ಹಾಲು–ಮೊಸರು ಹಾಕಿ ಬರೋದು ನನ್ ಕೆಲಸ ಆಗಿತ್ತು. ಆಗ ನಾ ಡೈರಿ ಕೆಲಸ ಮಾಡ್ತಾ ಇದ್ದೀನಿ ಅಂತ ಊರಲ್ಲಿ ಹೇಳಿಕೊಂಡಿದ್ದೆ. ಆ ಕೆಲಸಕ್ಕಾಗಿ ಊಟ–ವಸತಿ ಕೊಡ್ತಿದ್ರು. ಅಲ್ಲಿ ಸುಮಾರು ಏಳ್ ವರ್ಸ ದುಡ್ಡೆ. ಸೇರಿದಾಗ ತಿಂಗ್ಳಿಗೆ ನೂರು ರೂಪಾಯಿ ಇತ್ತು. ಬಿಟ್ಟಾಗ ಐನೂರು ರೂಪಾಯಿ ಆಗಿತ್ತು.
ಆ ಡೈರಿ ಕೆಲ್ಸಾ ಮಾಡೋ ಕಾಲಕ್ಕೇನೆ ಈ ಮಹಾರಾಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜುಗಳ ಮಕ್ಕಳಿಗೆ ಮಧ್ಯಾಹ್ನದ ಊಟದ ಕ್ಯಾರಿಯರ್ ಕೊಡುತ್ತಿದ್ದವರ ಪರಿಚಯವಾಯ್ತು. ನೀನೂ ಬರ್ತಿಯೇನಪ್ಪ ಅಂತ ಕರುದ್ರು. ಹನ್ನೊಂದು ಗಂಟೆಯೊತ್ಗೆ ಡೈರಿ ಕೆಲ್ಸ ಮುಗ್ಸಿ, ಹತ್–ಹನ್ನೆರಡು ಮನೆಯಿಂದ ಕ್ಯಾರಿಯರ್ ಇಸ್ಕೊಂಡು ಕಾಲೇಜು, ಬ್ಯಾಂಕು, ಗೋರ್ಮೆಂಟ್ ಆಪೀಸ್ಗಳ್ಗೆ ಒಯ್ದು ಕೊಡ್ತಿದ್ದೆ. ಒಂದು ಕ್ಯಾರಿಯರ್ಗೆ ಮೂವತ್ತು ರೂಪಾಯಿ ಕೊಡುತ್ತಿದ್ರು. ಈ ಕೆಲ್ಸ ಮೂರು ಗಂಟೆ ಹೊತ್ಗೆ ಮುಗೀತಿತ್ತು. ಮತ್ತೆ ಬಂದು ಡೈರಿಲಿ ಕೆಲ್ಸ ಮಾಡ್ತಿದ್ದೆ. ಹಿಂಗೆಯಾ ಎರಡು ವರ್ಷ ತಳ್ದೆ. ಅಷ್ಟೊತ್ಗೆ ಮದ್ವೆನೂ ಆಯ್ತು.
1973ರಲ್ಲಿ ಅನ್ಸುತ್ತೆ, ಈ ಮಾಗಡಿ ರೋಡಲ್ಲಿ ಇದ್ದ ಬಿನ್ನಿಮಿಲ್ನಲ್ಲಿ ಹೆಲ್ಪರ್ ಕೆಲ್ಸಕ್ಕೆ ಸೇರ್ದೆ. ಅಲ್ಲಿ ಗುಡಿಸೋದು, ಕಾಟನ್ ವೇಸ್ಟ್ನ ಒಂದು ಕಡೆ ಗುಡ್ಡೆ ಹಾಕೋದು, ಬಟ್ಟೆಗಳನ್ನು ಲೋಡ್ ಮಾಡೊ ಕೆಲ್ಸ. ಈ ಕೆಲ್ಸಾನಾ 2004ರವರ್ಗೆ ಮಾಡ್ದೆ. ಈ ಫ್ಯಾಕ್ಟರಿನಾ ಮಧ್ಯ ಮಧ್ಯ ಆರ್ ತಿಂಗ್ಳು–ವರ್ಷ ಮುಚ್ಚುತ್ತಿದ್ರು. ಆಗ ಕ್ಯಾರಿಯರ್ಗಳನ್ನು ಇಸ್ಕೊಂಡು ಕೊಡೋ ಕೆಲ್ಸಾನೂ ಮಾಡ್ತಿದ್ದೆ.
2005ರಿಂದ ಈ ಕ್ಯಾರಿಯರ್ ಕೆಲ್ಸಾನೆ ಕಾಯಂ ಮಾಡ್ಕೊಂಡೆ. ಮೊದಲಿಗೆ ಮೂರ್ನಾಲ್ಕು ಮನೆ ಸಿಕ್ಕಿದ್ವು. ಒಂದು ಮನೆಯೋರು ಪಕ್ಕದ ಮನೆಯೋರ್ಗೆ ಹೇಳೋರು. ಹಂಗೆಯಾ ಐದು, ಆರು, ಏಳಾಗಿ ಈಗ ಹದಿಮೂರಕ್ಕೆ ಬಂದು ನಿಂತವೆ.
ನಾನ್ ಇರೋದು ಕಮಲಾನಗರದಲ್ಲಿ. ಬೆಳ್ಗೆ 11ಕ್ಕೆ ಸೈಕಲ್ ಏರ್ತೆನೆ. ಈ ಓಕಳಿಪುರ, ಮಲ್ಲೇಶ್ವರ, ಪೈಪ್ಲೈನ್, ಕೃಷ್ಣಪ್ಪ ಬ್ಲಾಕು, ಶೇಷಾದ್ರಿಪುರ, ಶಿವಾನಂದ ಸರ್ಕಲ್ ಸುತ್ಮುತ್ಲಿನ ಮನೆಗಳಿಂದ ಕ್ಯಾರಿಯರ್ಗಳನ್ನ ತಕ್ಕಂಡು ಸೈಕಲ್ನಲ್ಲಿ ಮುಂದೆ ಆರು–ಹಿಂದೆ ಆರು ಜೋಡಿಸಿಕೊಳ್ತೇನೆ. ಅಷ್ಟೊತ್ತಿಗೆ ಒಂದು–ಒಂದೂವರೆ ಆಗಿರುತ್ತೆ. ಅಲ್ಲಿಂದ ನೇರಕ್ಕೆ ಅಲಂಕಾರ ಕಾಂಪ್ಲೆಕ್ಸ್ ಕಡೆ ನನ್ ಗಾಡಿ ಓಡುಸ್ತೇನೆ. ಬಿ.ವಿ.ಅಯ್ಯಂಗಾರ ರೋಡ್, ರಾಜ್ಕುಮಾರ್ ರೋಡ್, ಚಿಕ್ಕಪೇಟೆ, ಮಾಮೂಲಿ ಪೇಟೆ, ಅವೆನ್ಯೂ ರೋಡ್, ಕುಂಬಾರ್ ಪೇಟೆಯಲ್ಲಿನ ಅಂಗಡಿಗಳಲ್ಲಿ ಯಾಪಾರ ಮಾಡೊ ಅಂಗಡಿಗಳ ಮಾಲೀಕರ ಕೈಗೆ ಕ್ಯಾರಿಯರ್ ಇಡ್ತೇನೆ. ಅಷ್ಟೆ ನನ್ ಕೆಲ್ಸ.
ಅಯ್ಯೊ, ಒಂದ್ ಹತ್ ವರ್ಸದ್ ಹಿಂದೆ ಟ್ರಾಫಿಕ್ ಕಡ್ಮೆ ಇತ್ತು. ಆಗ ಸೈಕಲಲ್ಲಿ ಸಲೀಸಾಗಿ ಸುತ್ತಿ ಇಪ್ಪತ್ತು ಮನೆಗಳಿಂದ ಊಟ ತಗೊಂಡೋಗಿ ಕೊಡ್ತಿದ್ದೆ. ಈಗ ಟ್ರಾಫಿಕ್ ಜಾಮ್ ಜಾಸ್ತಿ ಕಣಪ್ಪ. ಈ ಅವೆನ್ಯೂ ರೋಡ್ ಕಡೆಯಂತು ಕೈಗಾಡಿ ತಳ್ಳೋರು, ಕಿವಿಯಲ್ಲಿ ವೈರು ಹಾಕ್ಕೊಂಡು ನಡಿಯೋರು ದಾರಿ ಬಿಟ್ಟೇ ನಡೆಯಲ್ಲ. ನಾನ್ ಬೇರೆ ಲೇಟಾಗಿ ಹೋದ್ರೆ, ಊಟಕ್ಕೆ ಕಾಯ್ತಿರೊ ಬಟ್ಟೆ, ಎಲೆಕ್ಟ್ರಿಕ್, ಸ್ಟೇಷ್ನರಿ ಅಂಗ್ಡಿಗಳ ಮಾರ್ವಾಡಿ, ಸೇಠ್ಗಳು ಬೈಯ್ದು ಬಿಡ್ತಾರೆ. ಟೈಮ್ ಸರಿಯಾಗಿ ಊಟ ಒಯ್ದು ಕೊಡುವರ್ಗೂ ನನ್ ಕಾಲ್ ಪೆಡಲ್ ಬಿಟ್ ಇಳಿಯಲ್ಲ. ಈ ಕ್ಯಾರಿಯರ್ ಸಪ್ಲೆ ಸರ್ವಿಸ್ಗೆ ಹತ್ ವರ್ಷದ ಹಿಂದೆ ನೂರೈವತ್ತು ತಗೊತ್ತಿದ್ದೆ. ಈಗ ಈ ಚಾರ್ಜು ತಿಂಗ್ಳಿಗೆ ಐನೂರು ಮಾಡ್ದೆ‘.
ನನ್ಗೆ ಈಗ ಸುಮಾರು 68 ವರ್ಷ ಇರ್ಬಹ್ದು. ನಾನೇನು ಇಸ್ಕೂಲ್ ಹೋದೊನಲ್ಲ. ಆದ್ರೆ, ಕನ್ನಡದಲ್ಲಿ ಸಹಿ ಮಾಡೊಕ್ಕೆ ಕಲ್ತ್ಕೊಂಡೆ. ಹೆಂಡ್ತಿ ಚಿಕ್ಕತಾಯಮ್ಮ. ಎರಡು ಹೆಣ್ ಮಕ್ಳನ್ನ ಮದ್ವೆ ಮಾಡಿ ಕೊಟಿವ್ನಿ. ಮಗ ರವಿಕುಮಾರ ಆಫೀಸ್ ಬಾಯ್ ಆಗಿ ಕೆಲ್ಸಾ ಮಾಡ್ತವ್ನೆ.
ಈ ಕ್ಯಾರಿಯರ್ ಸಪ್ಲೆ ಕೆಲ್ಸಕ್ಕೆ ದಿನಾಲು ಸುಮಾರು ಇಪ್ಪತ್ತು ಕಿ.ಮೀ. ಸೈಕಲ್ ಹೊಡಿತೇನೆ. ಹಾಗಾಗಿ ವಯಸ್ಸಾಗಿದ್ದೆ ಜನಕ್ಕೆ ಕಾಣಲ್ಲ. ಕೈ–ಕಾಲಲ್ಲೂ ಕಸುವು ಐತೆ. ಜೀವನ್ದಾಗೂ ನೆಮ್ದಿ ಐತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.